ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಭಾರಿ ಆಲಿಕಲ್ಲು ಮಳೆಯಾದ ಪರಿಣಾಮ ಇಡೀ ಕಲಘಟಗಿ ಗ್ರಾಮದಲ್ಲಿ ಆಲಿಕಲ್ಲುಗಳ ರಾಶಿ ಬಿದ್ದು, ಇದು ಕಲಘಟಗಿಯೋ, ಕಾಶ್ಮೀರವೋ ಎಂಬ ಜಿಜ್ಞಾಸೆಗೆ ಎಡೆ ಮಾಡಿಕೊಟ್ಟಿತ್ತು.
ಕಲಘಟಗಿ ಗ್ರಾಮದ ಸುತ್ತ ಸುರಿದ ಮಳೆಯ ಜೊತೆಗೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲುಗಳು ಬಿದ್ದಿದ್ದು, ರಸ್ತೆ, ಮನೆ ಸೇರಿದಂತೆ ಗಿಡ ಗಂಟೆಗಳೆಲ್ಲ ಅಕ್ಷರಶಃ ಮಂಜುಗಡ್ಡೆ ಆವರಿಸಿತ್ತು. ಸತತ ಮಂಜು ಸುರಿಯುವ ಪ್ರದೇಶದಂತೆ ಕಲಘಟಗಿಯ ಚಿತ್ರಣ ಬದಲಾಗಿತ್ತು. ರಸ್ತೆ, ಮನೆಗಳ ಮೇಲೆ ಬಿದ್ದಿದ್ದ ಆಲಿಕಲ್ಲುಗಳನ್ನು ತೆರವುಗೊಳಿಸಲು ಜನ ಹರಸಾಹಸ ಪಟ್ಟರು.

ಹಿಮಾಲಯದಲ್ಲಿ ಬೀಳುವ ಮಂಜಿನಂತೆಯೇ ಆಲಿಕಲ್ಲುಗಳು ಬಿದ್ದಿದ್ದವು. ಆರಂಭದಲ್ಲಿ ಆಲಿಕಲ್ಲುಗಳನ್ನು ನೋಡಿದ ಜನ ಕೇಕೆ ಹಾಕಿ ಸಂಭ್ರಮಿಸಿದ್ದರು. ನಂತರದಲ್ಲಿ ಆಲಿಕಲ್ಲು ಪ್ರಮಾಣ ಹೆಚ್ಚಾದಂತೆ ಜನ ಆತಂಕಗೊಂಡರು. ಅಲ್ಲದೇ, ಈ ಪ್ರಮಾಣದ ಆಲಿಕಲ್ಲು ಬಿದ್ದ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಇಡೀ ಧಾರವಾಡ ಜಿಲ್ಲೆಯ ಜನ ಕುತೂಹಲದಿಂದ ವೀಡಿಯೋ ತುಣಿಕುಗಳನ್ನು ವೀಕ್ಷಿಸಿ ಬೆರಗಾದರು.






















