ದಾವಣಗೆರೆ (ಹೊನ್ನಾಳಿ): ಪ್ರೀತಿಸುತ್ತಿದ್ದ ಅಪ್ರಾಪ್ತ ಜೋಡಿಯೊಂದು ಇಲ್ಲಿನ ತುಂಗಭದ್ರಾ ಸೇತುವೆಯಿಂದ ನದಿಗೆ ಹಾರಿದ ಘಟನೆ ಮಂಗಳವಾರ ನಡೆದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ನಗರದ ಬಾಡಾ ಕ್ರಾಸ್ ನಿವಾಸಿಗಳಾದ ಇಬ್ಬರು ಅನ್ಯ ಕೋಮಿಗೆ ಸೇರಿದ್ದು, ಇನ್ನೂ ಅಪ್ರಾಪ್ತರಾದರೂ ಪ್ರೀತಿಯ ಬಲೆಗೆ ಬಿದ್ದು, ಮದುವೆಗೆ ಮನೆಯವರ ವಿರೋಧವಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ನದಿಗೆ ಹಾರಿದ ತಕ್ಷಣವೇ ಪ್ರತ್ಯಕ್ಷದರ್ಶಿಗಳು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಕಾಲಕ್ಕೆ ಆಗಮಿಸಿ ನದಿಗೆ ಬಿದ್ದ ಜೋಡಿಯನ್ನು ರಕ್ಷಿಸಿ ಇಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊನ್ನಾಳಿ ಪೊಲೀಸರು ಅಪ್ರಾಪ್ತ ಜೋಡಿಯನ್ನು ವಿಚಾರಣೆಗೊಳಪಡಿಸಿದಾಗ, ಎರಡು ದಿನಗಳ ಹಿಂದೆ ಮೈಸೂರಿಗೆ ಹೋಗಿದ್ದರು. ನಂತರ ಶಿವಮೊಗ್ಗಕ್ಕೆ ವಾಪಸ್ ಬಂದರು. ಅಲ್ಲಿಂದ ಹೊನ್ನಾಳಿಗೆ ಆಗಮಿಸಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪ್ರಾಪ್ತೆಯ ಪಾಲಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಿದ್ದಾರೆ.























