ಗಂಗಾವತಿ: ವಿದೇಶಿ ಮಹಿಳೆ ಮತ್ತು ಹೋಟೆಲ್ ಮಾಲಕಿಯ ಮೇಲೆ ಅತ್ಯಾಚಾರ ಹಾಗೂ ಓರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು, ಮರಣದಂಡನೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಂಗಾಪುರ ಗ್ರಾಪಂ ವ್ಯಾಪ್ತಿಯ ಸಾಯಿನಗರದ ಗೌಂಡಿ ಕಾರ್ಮಿಕ ಮಲ್ಲೇಶ (ಹಂದಿ ಮಲ್ಲ), ಸಾಯಿ (ಚೈತನ್ಯ ಸಾಯಿ), ಶರಣಪ್ಪ (ಶರಣ ಬಸವರಾಜ್) ಮೇಲಿನ ಆರೋಪ ಸಾಬೀತಾಗಿದೆ.
ಪ್ರಕರಣ ಹಿನ್ನೆಲೆ: ತಾಲೂಕಿನ ಸಾಣಾಪುರ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿನ ಹಾರ್ಟ್ಲೈನ್ ಎಂಬ ಹೋಟೆಲ್ ಬಳಿ 2025ರ ಮಾರ್ಚ್ನಲ್ಲಿ ರಾತ್ರಿಯ ಪ್ರಕೃತಿ ಸೌಂದರ್ಯ ಸವಿಯಲು ತೆರಳಿದ್ದ ಇಸ್ರೇಲ್ ಮಹಿಳೆ ಮತ್ತು ಹೋಟೆಲ್ ಮಾಲಕಿಯ ಮೇಲೆ ಆರೋಪಿಗಳು ಅತ್ಯಾಚಾರ ನಡೆಸಿದ್ದರು. ಕೃತ್ಯ ತಡೆಯಲು ಯತ್ನಿಸಿದ ಅಮೆರಿಕಾದ ಡೇನಿಯಲ್, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಮತ್ತು ಒಡಿಶಾದ ಬಿಬಾಸ್ ಎಂಬ ಯುವಕರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಒಡಿಶಾದ ಬಿಬಾಸ್ (43) ಕೊಲೆಯಾಗಿದ್ದ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್ ತೀರ್ಪು
ಗಂಗಾವತಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ವಿಚಾರಣೆ ನಡೆಸಿದ್ದರು. 11 ತಿಂಗಳ ಬಳಿಕ ತೀರ್ಪು ನೀಡಲಾಗಿದೆ. ನ್ಯಾಯಾಧೀಶರು ಅಪರಾಧಿಗಳ ಸಾಮಾಜಿಕ, ಜೈಲಿನ ನಡವಳಿಕೆ ಮತ್ತು ಕೌಟುಂಬಿಕ ವರದಿಯನ್ನು ಕೇಳಿದ್ದರು. ಸರ್ಕಾರದ ಸಹಾಯಕ ಅಭಿಯೋಜಕಿ ನಾಗಲಕ್ಷ್ಮಿ ಸರ್ಕಾರದ ಪರ ವಾದ ಮಂಡಿಸಿದ್ದರು.























