ಜಿಲ್ಲಾ ಬಾಲಭವನದಲ್ಲಿ ಮಿನಿ ಕ್ರಿಕೆಟ್ ಸಂಭ್ರಮ: ಹೆಬ್ಬಾಳಕರ ಬೌಲ್ಗೆ ಜಾರಕಿಹೊಳಿ ಬ್ಯಾಟ್ – ಎಲ್ಲರ ಗಮನ ಸೆಳೆದ ಕ್ಷಣ
ಬೆಳಗಾವಿ: ನಗರದ ಶ್ರೀನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನೂತನವಾಗಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನಾ ಸಮಾರಂಭವು ಶುಕ್ರವಾರ ವಿಶಿಷ್ಟ ಕ್ಷಣಗಳಿಗೆ ಸಾಕ್ಷಿಯಾಯಿತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ನಡುವೆ ನಡೆದ ಮಿನಿ ಕ್ರಿಕೆಟ್ ಆಟ ಎಲ್ಲರ ಗಮನ ಸೆಳೆಯಿತು.
ಉದ್ಘಾಟನಾ ಸಮಾರಂಭದ ವೇಳೆ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೌಲ್ ಹಿಡಿದು ಚೆಂಡು ಎಸೆದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ: ಹಾಡಹಗಲೇ AAP ನಾಯಕ ಲಕ್ಕಿ ಒಬೆರಾಯ್ ಗುಂಡಿಕ್ಕಿ ಹತ್ಯೆ
ಹೆಬ್ಬಾಳಕರ ಬೌಲ್ಗೆ ಕ್ಲೀನ್ ಬೋಲ್ಡ್ ಆದ ಜಾರಕಿಹೊಳಿ: ಸಚಿವೆ ಹೆಬ್ಬಾಳಕರ ಎಸೆದ ಚೆಂಡಿಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉತ್ತರ ಶಾಸಕ ಆಸಿಫ್ (ರಾಜು) ಸೇಠ್ ಕ್ಲೀನ್ ಬೋಲ್ಡ್ ಆಗಿದ್ದು, ಈ ದೃಶ್ಯ ಎಲ್ಲರಿಗೂ ಮನರಂಜನೆ ನೀಡಿತು. ಈ ಆಟ ತಮಾಷೆಗಾಗಿ ನಡೆದಿದ್ದರೂ, ಸಚಿವರು ಹಾಗೂ ಶಾಸಕರ ಆಟದ ಶೈಲಿಯನ್ನು ನೋಡಿ ಅಲ್ಲಿದ್ದ ಗಣ್ಯರು ಮತ್ತು ಸಾರ್ವಜನಿಕರು ಕೆಲಕಾಲ ಹರ್ಷದಿಂದ ಕಣ್ಣು ತುಂಬಿಕೊಂಡರು.
ಕಾರ್ಯಕ್ರಮಕ್ಕೆ ಗಣ್ಯರ ಹಾಜರಿ: ಈ ಸಂದರ್ಭದಲ್ಲಿ ಉತ್ತರ ಶಾಸಕ ಆಸಿಫ್ (ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಡಾ ಮಾಜಿ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್, ಸಿಡಿಪಿಒ ಸುಮಿತ್ರಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಶಾಸಕ ಸತೀಶ್ ಸೈಲ್ಗೆ ಲಿವರ್ ಕಸಿಗಾಗಿ ವೈದ್ಯಕೀಯ ಜಾಮೀನು ಮಂಜೂರು
ಮಕ್ಕಳಿಗೆ ಕ್ರೀಡಾ ಪ್ರೋತ್ಸಾಹದ ಉದ್ದೇಶ: ಜಿಲ್ಲಾ ಬಾಲಭವನದಲ್ಲಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನವು ಮಕ್ಕಳಿಗೆ ಮತ್ತು ಯುವಜನತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಿದೆ. ಸರ್ಕಾರದ ಈ ಪ್ರಯತ್ನದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಉದ್ಘಾಟನಾ ಕಾರ್ಯಕ್ರಮವು ಕ್ರೀಡಾ ಮನೋಭಾವನೆ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಉತ್ತಮ ವೇದಿಕೆಯಾಗಿ ಪರಿಣಮಿಸಿತು.























