ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ಡಿ. 9ರಿಂದ 19ರವರೆಗೆ ನಡೆದ 10 ದಿನಗಳ ಚಳಿಗಾಲದ ಅಧಿವೇಶನದ ಪ್ರತಿ ಗಂಟೆಗೆ 24 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ಈ ಬಾರಿಯ ಅಧಿವೇಶನಕ್ಕೆ ರಾಜ್ಯದ ಬೊಕ್ಕಸದಿಂದ ಒಟ್ಟು 27,78,56,669 (ಸುಮಾರು 28 ಕೋಟಿ) ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಕೇವಲ 115 ಗಂಟೆ 45 ನಿಮಿಷಗಳ ಕಾಲ ನಡೆದ ಉಭಯ ಸದನಗಳ ಕಲಾಪವನ್ನು ಲೆಕ್ಕ ಹಾಕಿದರೆ, ಸರ್ಕಾರ ಪ್ರತಿ ಒಂದು ಗಂಟೆಗೆ ಅಂದಾಜು 24 ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರತಿ ಗಂಟೆಯ ವೆಚ್ಚದಲ್ಲಿ 4 ಲಕ್ಷ ರೂ.ಗಳಷ್ಟು ಏರಿಕೆಯಾಗಿರುವುದು ಕಳವಳಕಾರಿ ಸಂಗತಿ ಎಂದರು.
ಇದನ್ನೂ ಓದಿ: ಕೆ.ಎಸ್. ಈಶ್ವರಪ್ಪಗೆ ಮತ್ತೆ ಬೆದರಿಕೆ ಕರೆ, ‘ವೈ’ ಶ್ರೇಣಿಯ ಭದ್ರತೆಗೆ ಆಗ್ರಹ
ಗಣ್ಯರ ವಸತಿಗಾಗಿ 783 ಲಕ್ಷ, ಊಟ-ಉಪಹಾರಕ್ಕಾಗಿ 275 ಲಕ್ಷ, ಪೊಲೀಸ್ ಭದ್ರತೆಗಾಗಿ 924 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗಾಗಿ 687 ಲಕ್ಷ ರೂಪಾಯಿಗಳನ್ನು ಬಳಸಲಾಗಿದೆ.
ಜನಪ್ರತಿನಿಧಿಗಳಿಗೆ ಕಿಮೀಗೆ 35 ರೂ. ಪ್ರಯಾಣ ಭತ್ಯೆ ಹಾಗೂ ದಿನಕ್ಕೆ 2500 ರೂ. ದಿನಭತ್ಯೆ ನೀಡಲಾಗುತ್ತಿದೆ. ಈ ಭಾಗದ ಜನರ ನಿರೀಕ್ಷೆಯಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಗಂಭೀರ ಚರ್ಚೆಗಳು ನಡೆಯುವ ಬದಲು, ತೆರಿಗೆದಾರರ ಹಣವು ಹೋಟೆಲ್ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾಗುತ್ತಿದೆ ಎಂದು ಗಡಾದ್ ಕಿಡಿಕಾರಿದ್ದಾರೆ.






















