Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಬೀದಿ ನಾಯಿಗಳ ದಾಳಿ- 2 ವರ್ಷದ ಮಗುವಿಗೆ ಗಂಭೀರ ಗಾಯ

ಬೆಳಗಾವಿ: ಬೀದಿ ನಾಯಿಗಳ ದಾಳಿ- 2 ವರ್ಷದ ಮಗುವಿಗೆ ಗಂಭೀರ ಗಾಯ

0
74

ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೊಂದು ಹೃದಯವಿದ್ರಾವಕ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಬೆಳಗಾವಿಯ ಆಜಾದ್ ನಗರದಲ್ಲಿ ಕೇವಲ ಎರಡು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಭೀಕರವಾಗಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿದೆ.

ಆಜಾದ್ ನಗರ ನಿವಾಸಿ ಅಹ್ಮದ್ ಬಿಸ್ಕಿ (2) ಮನೆಯ ಎದುರು ಆಟವಾಡುತ್ತಿದ್ದ ಸಂದರ್ಭ ಏಕಾಏಕಿ ಬೀದಿ ನಾಯಿ ಮಗುವಿನ ಮೇಲೆ ಮುಗಿಬಿದ್ದಿದೆ. ಮಗುವಿನ ಮುಖ ಹಾಗೂ ತಲೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಭಾರೀ ರಕ್ತಸ್ರಾವವಾಗುತ್ತಿದ್ದ ಮಗು ನೋವಿನಿಂದ ಕಿರುಚಿದೆ. ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:  ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ತಕ್ಷಣ ಕುಟುಂಬಸ್ಥರು ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತೀವ್ರ ಚಿಕಿತ್ಸೆಯನ್ನು ಮುಂದುವರೆಸುತ್ತಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ ಮಗುವಿನ ಗಾಯಗಳು ಗಂಭೀರವಾಗಿದ್ದು, ಸದ್ಯ ನಿರಂತರ ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ.

ಮತ್ತೆ ಮುನ್ನೆಲೆಗೆ ಬಂದ ಬೀದಿ ನಾಯಿಗಳ ಸಮಸ್ಯೆ: ಈ ಘಟನೆ ಬೆಳಗಾವಿಯಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಮತ್ತೆ ತೀವ್ರವಾಗಿ ಮುನ್ನೆಲೆಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳಿಂದ ಮಕ್ಕಳ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೋಷಕರಲ್ಲಿ ಭಾರೀ ಆತಂಕ ಮನೆ ಮಾಡಿದೆ.

“ಪದೇ ಪದೇ ಬೀದಿ ನಾಯಿಗಳು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿವೆ. ಇದು ಮಹಾನಗರ ಪಾಲಿಕೆಯ ಸಂಪೂರ್ಣ ನಿರ್ಲಕ್ಷ್ಯದ ಫಲಿತಾಂಶ” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ

ಪಾಲಿಕೆ ವಿರುದ್ಧ ಸಾರ್ವಜನಿಕ ಆಕ್ರೋಶ: ಬೀದಿ ನಾಯಿಗಳ ನಿಯಂತ್ರಣದಲ್ಲಿ ವಿಫಲವಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳ ಆಟದ ಮೈದಾನಗಳು, ಮನೆಗಳ ಎದುರು ಹಾಗೂ ಶಾಲೆಗಳ ಸುತ್ತಮುತ್ತ ಬೀದಿ ನಾಯಿಗಳು ನಿರ್ಬಂಧವಿಲ್ಲದೆ ತಿರುಗಾಡುತ್ತಿರುವುದು ಅಪಾಯಕಾರಿಯಾಗಿದೆ ಎಂದು ಆರೋಪಿಸಲಾಗಿದೆ.

“ನಮ್ಮ ಮಕ್ಕಳನ್ನು ನಾವು ಹೇಗೆ ರಕ್ಷಿಸಬೇಕು?” ಎಂಬ ಪ್ರಶ್ನೆ ಇದೀಗ ಬೆಳಗಾವಿ ನಗರದಾದ್ಯಂತ ಪ್ರತಿಧ್ವನಿಸುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ನಗರದ ನಾಗರಿಕರ ಜೀವ ಮತ್ತು ಮಕ್ಕಳ ಸುರಕ್ಷತೆಗಾಗಿ ಪಾಲಿಕೆ ಕೂಡಲೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಜೋರಾಗಿದೆ.

Previous articleಬಳ್ಳಾರಿ: ಗಲಭೆ ನಡೆದು ಐದು ದಿನಗಳ ಬಳಿಕ‌ ಬಾಂಬ್ ಸ್ಕ್ವಾಡ್, ಸೋಕೋ‌ ತಂಡ
Next articleಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ