ದಾವಣಗೆರೆ: ಈಗ ಆದಷ್ಟೂ ಮೌನವಾಗಿರಲು ಬಯಸುತ್ತೇವೆ, ಸದ್ಯಕ್ಕೆ ಏನನ್ನೂ ಹೇಳಲು ನಾನು ಬಯಸುವುದಿಲ್ಲ ಎಂದು ಫೋಕ್ಸೋ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಚಿತ್ರದುರ್ಗ ಮುರುಘಾ ಶರಣರು ತಿಳಿಸಿದ್ದಾರೆ.
ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು ಎಂದು ಮಾತು ಆರಂಭಿಸಿದ ಶ್ರೀಗಳು, ಈಗ ಏನೂ ಮಾತನಾಡುವ ಸಮಯವಲ್ಲ. ಸಮಯ ಕಡಿಮೆಯಿದೆ. ಹಾಗಾಗಿ, ಶೀಘ್ರವೇ ಸುದ್ದಿಗೋಷ್ಠಿ ಕರೆದು ಸವಿವರವಾಗಿ ಮಾತನಾಡುವೆ ಎಂದು ದಾವಣಗೆರೆಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಮೂವರು ಆರೋಪಿಗಳು ನಿರ್ದೋಷಿ: ಹಲವು ತಿಂಗಳುಗಳಿಂದ ರಾಜ್ಯದ ಗಮನ ಸೆಳೆದಿದ್ದ ಅಪ್ರಾಪ್ತ ಬಾಲಕಿಯರಿಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಸ್ವಾಮೀಜಿ ಸೇರಿದಂತೆ ಪ್ರಕರಣದಲ್ಲಿರುವ ಮೂವರು ಆರೋಪಿಗಳೂ ನಿರ್ದೋಷಿಗಳು ಎಂದು ತೀರ್ಪು ನೀಡಿದೆ.
2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ ಅವರಿದ್ದ ಪೀಠ ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮೊದಲ ಪ್ರಕರಣ ಖುಲಾಸೆಯಾಗಿದೆ.


























