KGF ಆಯ್ತು, ಈಗ ಈ 5 ಜಿಲ್ಲೆಗಳ ಸರದಿ: ಕರ್ನಾಟಕದ ಮಣ್ಣಲ್ಲಿ ಮತ್ತೆ ಸಿಕ್ತು ಚಿನ್ನದ ನಿಕ್ಷೇಪ!

1
83

KGF: ಆಯ್ತು, ಈಗ ಈ 5 ಜಿಲ್ಲೆಗಳ ಸರದಿ: ಕರ್ನಾಟಕದ ಮಣ್ಣಲ್ಲಿ ಮತ್ತೆ ಸಿಕ್ತು ಚಿನ್ನದ ನಿಕ್ಷೇಪ!ಒಂದು ಕಾಲದಲ್ಲಿ ಕೆಜಿಎಫ್ (ಕೋಲಾರ ಚಿನ್ನದ ಗಣಿ) ಮೂಲಕ ಇಡೀ ವಿಶ್ವದಲ್ಲೇ ‘ಚಿನ್ನದ ನಾಡು’ ಎಂದು ಖ್ಯಾತಿ ಗಳಿಸಿದ್ದ ಕರ್ನಾಟಕ, ಇದೀಗ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

ಭೂತಾಯಿಯ ಒಡಲಿನಲ್ಲಿ ಅಡಗಿರುವ ಅಪಾರ ಸಂಪತ್ತನ್ನು ಹೊರತೆಗೆಯಲು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿಂದೆಂದೂ ಕಾಣದಂತಹ ಬೃಹತ್ ಕಾರ್ಯಾಚರಣೆಗೆ ಇಳಿದಿದೆ. ಈ ಕಾರ್ಯಾಚರಣೆಯ ಫಲವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪವಿರುವ ಆಶಾಭಾವನೆ ಮೂಡಿದೆ.

ಐತಿಹಾಸಿಕ ಶೋಧ ಕಾರ್ಯ:  ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬರೋಬ್ಬರಿ 16,350 ಹೆಕ್ಟೇರ್ ಪ್ರದೇಶದಲ್ಲಿ ಖನಿಜಗಳ ಶೋಧನೆ ನಡೆಯುತ್ತಿದೆ. ಒಟ್ಟು 19 ಕಡೆಗಳಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಲ್ಲಿ, ಐದು ಜಿಲ್ಲೆಗಳ ಮಣ್ಣಿನಲ್ಲಿ ಚಿನ್ನದ ಅಂಶವಿರುವುದು ಪ್ರಾಥಮಿಕ ತಪಾಸಣೆಯಲ್ಲಿ ದೃಢಪಟ್ಟಿದೆ. ಆ ಅದೃಷ್ಟದ ಜಿಲ್ಲೆಗಳೆಂದರೆ.

  • ಹಾವೇರಿ
  • ಕೊಪ್ಪಳ
  • ಮಂಡ್ಯ
  • ಚಿತ್ರದುರ್ಗ
  • ಬಳ್ಳಾರಿ

ಈ ಜಿಲ್ಲೆಗಳ ಆಯ್ದ ಭಾಗಗಳಲ್ಲಿ ಭೂವಿಜ್ಞಾನಿಗಳು ನಡೆಸಿದ ಪ್ರಾಥಮಿಕ ಹಂತದ ಶೋಧದಲ್ಲಿ ಹಳದಿ ಲೋಹದ ಕುರುಹುಗಳು ಸಿಕ್ಕಿವೆ. ಇದು ಕೇವಲ ಆರಂಭವಷ್ಟೇ. ಹಟ್ಟಿ ಚಿನ್ನದ ಗಣಿಯನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಚಿನ್ನದ ಗಣಿಗಾರಿಕೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಚಿನ್ನ ಮಾತ್ರವಲ್ಲ, ಇನ್ನೂ ಇದೆ ನಿಧಿ!: ಈ ಮಹಾ ಅನ್ವೇಷಣೆಯ ಉದ್ದೇಶ ಕೇವಲ ಚಿನ್ನವನ್ನು ಹುಡುಕುವುದಲ್ಲ. ಬದಲಿಗೆ ದೇಶದ ಭದ್ರತೆ ಮತ್ತು ಆರ್ಥಿಕತೆಗೆ ಅತ್ಯಗತ್ಯವಾಗಿರುವ ಯುರೇನಿಯಂ, ಬಾಕ್ಸೈಟ್, ತಾಮ್ರ, ಮತ್ತು ಲಿಥಿಯಂನಂತಹ ಬೆಲೆಬಾಳುವ ಖನಿಜಗಳನ್ನು ಪತ್ತೆಹಚ್ಚುವುದಾಗಿದೆ.

ಒಟ್ಟು ಯೋಜನೆಯಲ್ಲಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶವನ್ನು ವಿಶೇಷವಾಗಿ ಚಿನ್ನದ ಶೋಧಕ್ಕಾಗಿಯೇ ಮೀಸಲಿಡಲಾಗಿದೆ ಎಂಬುದು ವಿಶೇಷ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ಲಾಟಿನಂ ಮತ್ತು ನಿಕ್ಕಲ್‌ನಂತಹ ಅತ್ಯಮೂಲ್ಯ ಲೋಹಗಳು ಸಿಗುವ ಸಾಧ್ಯತೆಯ ಬಗ್ಗೆಯೂ ಭೂವೈಜ್ಞಾನಿಕ ವರದಿಗಳು ಸುಳಿವು ನೀಡಿವೆ.

ನಾಲ್ಕು ಹಂತದ ವೈಜ್ಞಾನಿಕ ಪರೀಕ್ಷೆ: ಈ ಶೋಧ ಕಾರ್ಯ ರಾತ್ರೋರಾತ್ರಿ ನಡೆಯುವ ಪವಾಡವಲ್ಲ. ಇದಕ್ಕೆ ರಾಷ್ಟ್ರೀಯ ಖನಿಜ ಅನ್ವೇಷಣಾ ಟ್ರಸ್ಟ್ (NMET) ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳು ಕೈಜೋಡಿಸಿವೆ. ಪ್ರಕ್ರಿಯೆಯು ಒಟ್ಟು ನಾಲ್ಕು ಕಠಿಣ ಹಂತಗಳನ್ನು ಒಳಗೊಂಡಿರುತ್ತದೆ.

ವಿಚಕ್ಷಣಾ ಸಮೀಕ್ಷೆ: ವಿಶಾಲವಾದ ಪ್ರದೇಶದಲ್ಲಿ ಖನಿಜಗಳ ಲಭ್ಯತೆಯ ಬಗ್ಗೆ ಮೇಲ್ನೋಟದ ಅಧ್ಯಯನ.

ಪ್ರಾಥಮಿಕ ಅನ್ವೇಷಣೆ: ಖನಿಜ ಲಭ್ಯವಿರುವ ನಿರ್ದಿಷ್ಟ ಪ್ರದೇಶವನ್ನು ಗುರುತಿಸುವುದು.

ಸಾಮಾನ್ಯ ಅನ್ವೇಷಣೆ: ಖನಿಜದ ಗುಣಮಟ್ಟ ಮತ್ತು ಹರವು ಎಷ್ಟಿದೆ ಎಂದು ತಿಳಿಯುವುದು.

ವಿವರವಾದ ಅನ್ವೇಷಣೆ: ಗಣಿಗಾರಿಕೆ ಯೋಗ್ಯವೇ ಮತ್ತು ವಾಣಿಜ್ಯಿಕವಾಗಿ ಲಾಭದಾಯಕವೇ ಎಂದು ನಿರ್ಧರಿಸುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಕಡೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು.

ಮುಂದಿನ ಗುರಿ: 52 ಹೊಸ ತಾಣಗಳು, ಪ್ರಸ್ತುತ 19 ಸ್ಥಳಗಳಲ್ಲದೆ ಇಲಾಖೆಯು ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ (ಹೊಳೆಹೊನ್ನೂರು), ವಿಜಯನಗರ, ಕಲಬುರಗಿ ಮತ್ತು ಚಾಮರಾಜನಗರ ಸೇರಿದಂತೆ 52 ಹೊಸ ಕಡೆಗಳಲ್ಲಿ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಇವುಗಳಲ್ಲಿ ಹಲವು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಅನುಮತಿಗಾಗಿ ಕಾಯಲಾಗುತ್ತಿದೆ.

ಆರ್ಥಿಕತೆಗೆ ಆನೆ ಬಲ ಮತ್ತು ಉದ್ಯೋಗ ಸೃಷ್ಟಿ: ಪ್ರಸ್ತುತ ಜಗತ್ತಿನಲ್ಲಿ ‘ರೇರ್ ಅರ್ಥ್ ಎಲಿಮೆಂಟ್ಸ್’ (ಅಪರೂಪದ ಧಾತುಗಳು) ಮೇಲೆ ಚೀನಾ ದೇಶ ಏಕಸ್ವಾಮ್ಯ ಸಾಧಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಕಚ್ಚಾ ಸಂಪನ್ಮೂಲಗಳಿಗಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ.

ಒಂದು ವೇಳೆ ಕರ್ನಾಟಕದಲ್ಲಿ ಈ ಖನಿಜಗಳು ಮತ್ತು ಚಿನ್ನದ ಗಣಿಗಳು ಅಧಿಕೃತವಾಗಿ ಕಾರ್ಯಾರಂಭಿಸಿದರೆ, ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ಆದಾಯ ಹರಿದು ಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಉತ್ತರ ಕರ್ನಾಟಕ ಮತ್ತು ಬಯಲುಸೀಮೆ ಭಾಗದಲ್ಲಿ ಸ್ಥಳೀಯರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಭೂಗರ್ಭದಲ್ಲಿ ಅಡಗಿರುವ ಈ ಸಂಪತ್ತು ಕರ್ನಾಟಕದ ಆರ್ಥಿಕ ಚಿತ್ರಣವನ್ನೇ ಬದಲಿಸುವ ಶಕ್ತಿ ಹೊಂದಿದೆ. ಈ ಶೋಧ ಕಾರ್ಯ ಯಶಸ್ವಿಯಾದರೆ, ‘ಚಿನ್ನದ ನಾಡು’ ಎಂಬ ಹೆಗ್ಗಳಿಕೆ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗದೆ, ವರ್ತಮಾನದಲ್ಲೂ ಮಿನುಗಲಿದೆ.

Previous articleಧರ್ಮಸ್ಥಳ ಪ್ರಕರಣ:‌ ಬೆಳ್ತಂಗಡಿ ಕೋರ್ಟ್‌ಗೆ 3,923 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
Next articleವಾಹನ ಕಳ್ಳನ ಬಂಧನ: ಲಕ್ಷಾಂತರ ರೂ. ಮೌಲ್ಯದ ಕಾರು, ಬೈಕ್ ಜಪ್ತಿ

1 COMMENT

  1. Thanks for another informative website. The place else
    could I get that kind of info written in such a perfect way?
    I have a undertaking that I’m simply now working
    on, and I’ve been on the look out for such info.

LEAVE A REPLY

Please enter your comment!
Please enter your name here