ಬೌಲರ್‌ಗಳೇನು ಮಷೀನ್‌ಗಳೇ?: ವೇಗಿಗಳ ಪರ ಧ್ವನಿ ಎತ್ತಿದ ಭುವನೇಶ್ವರ್ ಕುಮಾರ್

0
11

“ಯಂತ್ರಗಳ ಭಾಗಗಳನ್ನು ಬೇಕಾದರೆ ಬದಲಾಯಿಸಬಹುದು, ಆದರೆ ಮಾನವನ ದೇಹ ಹಾಗಲ್ಲ,” – ಇವು ಟೀಂ ಇಂಡಿಯಾದ ಅನುಭವಿ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಖಡಕ್ ಮಾತುಗಳು ಇತ್ತೀಚೆಗೆ ವೇಗದ ಬೌಲರ್‌ಗಳು ಪದೇ ಪದೇ ಗಾಯಗೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು, ಬೌಲರ್‌ಗಳ ಕಾರ್ಯದೊತ್ತಡ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

“ಗಾಯದಿಂದ ಚೇತರಿಸಿಕೊಳ್ಳಲು ಸಮಯ ಬೇಕು”: ಇತ್ತೀಚೆಗೆ ಮಾತನಾಡಿದ ಅವರು, “ಯಾವುದೇ ತಂಡವು ತನ್ನ ಪ್ರಮುಖ ಬೌಲರ್ ಗಾಯಗೊಳ್ಳಬಾರದು ಎಂದು ಬಯಸುತ್ತದೆ. ಆದರೆ, ಅವರೂ ಮನುಷ್ಯರೇ, ಯಂತ್ರಗಳಲ್ಲ. ಒಬ್ಬ ಆಟಗಾರ ಗಾಯಗೊಂಡರೆ, ಪುನರ್ವಸತಿ ಮತ್ತು ಹಳೆಯ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಮಯ ಬೇಕಾಗುತ್ತದೆ.

ಹಾಗಾಗಿ, ನಮ್ಮ ಅತ್ಯುತ್ತಮ ಬೌಲರ್‌ಗಳನ್ನು ಗಾಯದಿಂದ ದೂರವಿಡಲು ಮತ್ತು ಅವರು ದೀರ್ಘಕಾಲದವರೆಗೆ ತಮ್ಮ ಫಾರ್ಮ್ ಅನ್ನು ಕಾಪಾಡಿಕೊಳ್ಳಲು ಕಾರ್ಯದೊತ್ತಡ ನಿರ್ವಹಣೆ ಅತ್ಯಂತ ಅವಶ್ಯಕ,” ಎಂದು ವಿವರಿಸಿದರು.

ಬ್ಯಾಟರ್ Vs. ಬೌಲರ್:  ಬ್ಯಾಟರ್‌ಗಳಿಗಿಂತ ಬೌಲರ್‌ಗಳು ಗಾಯದಿಂದ ಚೇತರಿಸಿಕೊಳ್ಳಲು ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ, ಭುವನೇಶ್ವರ್ ಅತ್ಯುತ್ತಮವಾಗಿ ಉತ್ತರಿಸಿದರು. “ಬ್ಯಾಟರ್ ಮತ್ತು ಬೌಲರ್ ಇಬ್ಬರ ದೇಹವೂ ವಿಭಿನ್ನ.

ವೇಗದ ಬೌಲಿಂಗ್ ಮಾಡುವುದರಿಂದ ದೇಹದ ಮೇಲೆ ಒತ್ತಡ ಬೀಳುತ್ತದೆ. ಒಬ್ಬ ಬ್ಯಾಟ್ಸ್‌ಮನ್ ಶೇ. 90ರಷ್ಟು ಫಿಟ್ ಆಗಿದ್ದರೂ, ಅವರು ಪಂದ್ಯವನ್ನು ಆಡಬಹುದು. ಆದರೆ, ಒಬ್ಬ ಬೌಲರ್ ಶೇ. 90ರಷ್ಟು ಫಿಟ್ ಆಗಿದ್ದರೆ, ನಾವು ಅವರನ್ನು ‘ಇನ್ನೂ 10% ಫಿಟ್ ಆಗಿಲ್ಲ’ ಎಂದು ಪರಿಗಣಿಸುತ್ತೇವೆ. ಏಕೆಂದರೆ, ವೇಗದ ಬೌಲಿಂಗ್‌ಗೆ ಶೇ. 100ರಷ್ಟು ಫಿಟ್‌ನೆಸ್ ಬೇಕೇ ಬೇಕು,” ಎಂದು ಸ್ಪಷ್ಟಪಡಿಸಿದರು.

ಯಾರಿಗೆ ಬೇಕು ಈ ‘ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್’?: “ಕಾರ್ಯದೊತ್ತಡ ನಿರ್ವಹಣೆ ಎಲ್ಲರಿಗೂ ಅನ್ವಯಿಸುವುದಿಲ್ಲ,” ಎನ್ನುವುದು ಭುವನೇಶ್ವರ್ ಅಭಿಪ್ರಾಯ. “ದೇಶಕ್ಕಾಗಿ ಮೂರೂ ಮಾದರಿಗಳಲ್ಲಿ ಆಡುವ, ವರ್ಷವಿಡೀ ಕ್ರಿಕೆಟ್ ಆಡುವ ಆಟಗಾರರಿಗೆ ಇದು ಅತ್ಯಗತ್ಯ. ಆದರೆ, ಅಂಡರ್-19 ಮಟ್ಟದ ಯುವ ಆಟಗಾರರಿಗೆ ಇದರ ಬಗ್ಗೆ ಕಲಿಸುವುದು ಸರಿಯಲ್ಲ. ಏಕೆಂದರೆ, ಆಗ ಅವರು ತಮ್ಮ ದೇಹದ ಮಿತಿಯನ್ನು ಅರ್ಥಮಾಡಿಕೊಳ್ಳುವುದನ್ನೇ ಕಲಿಯುವುದಿಲ್ಲ,” ಎಂದು ಹೇಳಿದರು.

“ಸ್ವಿಂಗ್ ಬೌಲಿಂಗ್ ಕಲೆ ಸತ್ತಿಲ್ಲ”: ಭಾರತದಲ್ಲಿ ಸ್ವಿಂಗ್ ಬೌಲಿಂಗ್ ಕಲೆ ಕಣ್ಮರೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ, “ಖಂಡಿತ ಇಲ್ಲ. ಈ ಕಲೆಯನ್ನು ಸಿದ್ಧಿಸಿಕೊಂಡಿರುವ ಅನೇಕ ಬೌಲರ್‌ಗಳು ನಮ್ಮಲ್ಲಿದ್ದಾರೆ. ಅವರೆಲ್ಲರೂ ಇನ್ನೂ ಭಾರತ ತಂಡದಲ್ಲಿ ಆಡದ ಕಾರಣ, ಅವರ ಹೆಸರುಗಳು ನಿಮಗೆ ತಿಳಿದಿಲ್ಲದಿರಬಹುದು. ಅಂಡರ್-19 ಮಟ್ಟದಲ್ಲಿ ಅನೇಕ ಸ್ವಿಂಗ್ ಬೌಲರ್‌ಗಳಿದ್ದಾರೆ,” ಎಂದು ಭರವಸೆ ವ್ಯಕ್ತಪಡಿಸಿದರು.

ಐಪಿಎಲ್ 2026ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭುವನೇಶ್ವರ್ ಕುಮಾರ್ ಅವರನ್ನು ಉಳಿಸಿಕೊಂಡಿದ್ದು, ತಮ್ಮ ಅನುಭವದ ಮೂಲಕ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಿದೆ.

Previous articleಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರತೀ ವರ್ಷ ಪರಿಸರವಾದಿಗಳಿಗೆ ಪ್ರಶಸ್ತಿ
Next articleಬಿಜೆಪಿ ನಾಯಕತ್ವ ಬದಲಾವಣೆಯಾಗಲೇಬೇಕು

LEAVE A REPLY

Please enter your comment!
Please enter your name here