ಬೆಂಗಳೂರು: ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿದ್ದ ಗಡೀಪಾರು ಆದೇಶಕ್ಕೆ ದೊಡ್ಡ ತಿರುವು ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಾದಾತ್ಮಕ ವ್ಯಕ್ತಿ ಮಹೇಶ್ ಶೆಟ್ಟಿ ತಿಮರೋಡಿಗೆ ಗಡೀಪಾರು ಮಾಡಿದ್ದ ಆಡಳಿತದ ಸೆಪ್ಟೆಂಬರ್ 18ರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ (ನವೆಂಬರ್ 17) ರದ್ದುಪಡಿಸಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಉಪವಿಭಾಗಾಧಿಕಾರಿಗಳ ಆದೇಶದಲ್ಲಿ ಕಾನೂನುಬದ್ಧ ಕಾರಣಗಳಿರಬೇಕೆಂಬ ಅವಶ್ಯಕತೆ ಪೂರೈಸಲಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋರ್ಟ್ ಗಮನಿಸಿದಂತೆ, ನಿರ್ದಿಷ್ಟ ಕಾರಣಗಳು, ಸಂಬಂಧಿತ ಕಾನೂನು ಕಲಂಗಳು ಮತ್ತು ಪರ್ಯಾಯ ಆಧಾರಗಳ ಜತೆಗೇ ಗಡೀಪಾರು ಆದೇಶ ಹೊರಡಿಸುವುದು ಕಡ್ಡಾಯ. ಆದರೆ ಸೆಪ್ಟೆಂಬರ್ 18ರ ಆದೇಶದಲ್ಲಿ ಈ ಅಂಶಗಳು ಸಮರ್ಪಕವಾಗಿ ತೋರಿಸಲ್ಪಡಲಿಲ್ಲ ಎಂದು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ, ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ: ಹೊಸದಾಗಿ ವಿಚಾರಣೆ ನಡೆಸಬೇಕು ಹಾಗೂ ಸೂಕ್ತವಾದ ಕಾರಣಗಳು ಮತ್ತು ಸಂಬಂಧಿತ ಸೆಕ್ಷನ್ಗಳನ್ನು ಬಳಸಿ ಮತ್ತು 15 ದಿನಗಳೊಳಗೆ ಹೊಸ ಆದೇಶ ಹೊರಡಿಸುವುದು ಕಡ್ಡಾಯ ಎಂದು ತಿಳಿಸಿದೆ
ಮಹೇಶ್ ಶೆಟ್ಟಿ ತಿಮರೋಡಿ ಮೇಲಿನ ಆರೋಪಗಳನ್ನು ಗಮನಿಸಿದರೆ, ಅವರ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿವೆ. ಇದೇ ಕಾರಣಕ್ಕೆ, ಪುತ್ತೂರು ಉಪವಿಭಾಗಾಧಿಕಾರಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಒಂದು ವರ್ಷದ ಅವಧಿಗೆ ಅವರು ಸೆಪ್ಟೆಂಬರ್ 18ರಂದು ಗಡೀಪಾರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ‘ಸ್ವಾಭಾವಿಕ ನ್ಯಾಯ’ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆಧಾರದ ಮೇಲೆ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೇ ಪ್ರಕರಣದಲ್ಲಿ ಹೈಕೋರ್ಟ್ ಸೂಕ್ತ ಕ್ರಮ ಕೈಗೊಂಡಿದ್ದು. ಗಡೀಪಾರು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಇದೀಗ ಮುಂದಿನ 15 ದಿನಗಳಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ.
























