ಬೆಂಗಳೂರು : ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಮೊದಲು ಕರ್ನಾಟಕದ ಮಹದೇವಪುರ, ನಂತರ ಅಳಂದ ವಿಧಾನಸಭಾ ಮತಗಳ್ಳತನವನ್ನು ಬಯಲು ಮಾಡಿದ್ದರು, ಇಂದು ಹರಿಯಾಣ ರಾಜ್ಯದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಿದ್ದಾರೆ ಎಂಬುದನ್ನು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆಯ ಮೂಲಕ ಪ್ರಜಾತಂತ್ರದ ರಕ್ಷಣೆಯ ಮಾಡಬೇಕಿರುವ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಹೇಗೆ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿ.
ಮಹಾರಾಷ್ಟ್ರ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯರ ಹೆಸರುಗಳನ್ನಷ್ಟೇ ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಬಿಜೆಪಿ ಮತ್ತು ಚುನಾವಣಾ ಆಯೋಗ, ಹರಿಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬ್ರೆಜಿಲ್ನ ರೂಪದರ್ಶಿಯ ಗುರುತನ್ನು ಕೂಡ ತನ್ನ ಮತಗಳ್ಳತನಕ್ಕೆ ಬಳಕೆ ಮಾಡಿಕೊಂಡಿರುವುದು ಅವರ ನಿರ್ಲಜ್ಜತನಕ್ಕೆ ಸಾಕ್ಷಿ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನ ಹೋಗುವುದು ಗ್ಯಾರಂಟಿ.
5 ಲಕ್ಷಕ್ಕೂ ಅಧಿಕ ನಕಲಿ ಮತದಾರರು, ತಿರುಚಿದ ಅಥವಾ ಗುರುತಿಸಲು ಸಾಧ್ಯವಾಗದಂತಹ ಫೋಟೊ ಬಳಸಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಕಳವು ಮಾಡಲಾಗಿದೆ. ಹೀಗೆ ಒಟ್ಟು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಅಂದರೆ ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8 ಜನರ ಪೈಕಿ ಒಂದು ನಕಲಿ ಮತ ಎನ್ನುವುದು ಸ್ಪಷ್ಟ.
ದೇಶದ ಬಹುತೇಕ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದರೂ, ಹರಿಯಾಣದ ಜನ ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲೇಬೇಕು ಎಂಬ ದೃಢ ಸಂಕಲ್ಪ ಮಾಡಿದರೂ ಬಿಜೆಪಿ ಹೇಗೆ ಬಹುಮತ ಪಡೆದು ಸರ್ಕಾರ ರಚಿಸಿತು ಎನ್ನುವ ಅನುಮಾನಕ್ಕೆ ರಾಹುಲ್ ಗಾಂಧಿಯವರು ಉತ್ತರ ನೀಡಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಹಾರಿಕೆ ಉತ್ತರ ನೀಡಿ ಪಲಾಯನ ಮಾಡುತ್ತಿದ್ದ, ಆರೋಪ ಮಾಡಿದವರನ್ನೇ ಪ್ರಮಾಣ ಮಾಡಿ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಬಾರಿಯಾದರೂ “ತನ್ನ ಮಾಲೀಕರ” ರಕ್ಷಣೆಯ ದುಸ್ಸಾಹಸಕ್ಕೆ ಕೈಹಾಕದೆ ಸತ್ಯ ಒಪ್ಪಿಕೊಂಡು, ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದಿದ್ದಾರೆ.


























ಇದು ಶುದ್ಧ ಸುಳ್ಳು ಮಾಹಿತಿ. ಏಕೆಂದರೆ ಪ್ರತಿಯೊಬ್ಬರೂ ಮತ ಚಲಾಯಿಸಿದ ನಂತರ ಅವರ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುತ್ತದೆ. ಅದನ್ನು ತಕ್ಷಣಕ್ಕೆ ತೆಗೆದು ಹಾಕಲಿಕ್ಕೆ ಸಾಧ್ಯವಾಗುವುದಿಲ್ಲ ಅಂತಹದ್ದರಲ್ಲಿ 22 ಬಾರಿ ಮತ ಚಲಾಯಿಸುವುದು ಹೇಗೆ ಸಾಧ್ಯ. ಪ್ರತಿ ಚುನಾವಣಾ ಬೂತ್ ನಲ್ಲಿ ಎಲ್ಲಾ ಪಕ್ಷದವರ ಬೂತ್ ಏಜೆಂಟ್ ಗಳಿರುತ್ತಾರೆ ಅವರೆಲ್ಲರೂ ಇದನ್ನು ಗಮನಿಸುವುದಿಲ್ಲವೇ. ಈ ನಾಲಾಯಕ್ ರಾಹುಲ್ ಗಾಂಧಿ ಜನರನ್ನೇನು ಮೂರ್ಖರೆಂದುಕೊಂಡಿದ್ದಾನಾ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ.