ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತೀಯ ನಾಗರಿಕರಿಗೆ, Zoho Corporation ಅಭಿವೃದ್ಧಿಪಡಿಸಿರುವ ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟಾಯಿ (Arattai) ಬಳಸಿ, ಸ್ವದೇಶಿ ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು ಅರಟ್ಟಾಯಿ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಹೆಮ್ಮೆಯಿಂದ ತಯಾರಿಸಲಾದ, “ಉಚಿತ, ಬಳಸಲು ಸುಲಭ, ಸುರಕ್ಷಿತ ಮತ್ತು ನಂಬಿಗಸ್ತ” ಮೆಸೇಜಿಂಗ್ ಆ್ಯಪ್ ಎಂದು ವರ್ಣಿಸಿದರು.
ಮೋದಿಯವರ ಸ್ವದೇಶಿ ಕರೆ: “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರನ್ನು ಸ್ಥಳೀಯವಾಗಿ ತಯಾರಾದ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಯಾವಾಗಲೂ ಕರೆ ನೀಡಿದ್ದಾರೆ. ಆ ಕರೆಯನ್ನು ಬೆಂಬಲಿಸುವ ಉದ್ದೇಶದಿಂದ, ನಾವು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಭಾರತೀಯ ಆ್ಯಪ್ಗಳನ್ನು ಬಳಸಬೇಕು. ಅರಟ್ಟಾಯಿ ಅದಕ್ಕೆ ಉತ್ತಮ ಉದಾಹರಣೆ,” ಎಂದು ಪ್ರಧಾನ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದರು.
ಈ ಅಪ್ಲಿಕೇಶನ್ ಅನ್ನು, ಭಾರತೀಯ ತಂತ್ರಜ್ಞಾನ ಸಂಸ್ಥೆ Zoho Corporation ತಯಾರಿಸಿದ್ದು, ಇದನ್ನು ಅನೇಕರು ಅಮೇರಿಕಾದ ಮೆಟಾ ಕಂಪನಿಯ WhatsApp ಗೆ ಸ್ವದೇಶಿ ಪರ್ಯಾಯವೆಂದು ಪರಿಗಣಿಸುತ್ತಿದ್ದಾರೆ. ಅರೆಟ್ಟೆ ಆ್ಯಪ್ನಲ್ಲಿ ಬಳಕೆದಾರರು ಉಚಿತವಾಗಿ ಟೆಕ್ಸ್ಟ್ ಸಂದೇಶಗಳು, ಫೋಟೋ, ವೀಡಿಯೋ, ಡಾಕ್ಯುಮೆಂಟ್ ಹಂಚಿಕೊಳ್ಳಬಹುದು. ಜೊತೆಗೆ ಧ್ವನಿ ಮತ್ತು ವೀಡಿಯೋ ಕರೆಗಳ ಸೌಲಭ್ಯವಿದೆ.
ಗೌಪ್ಯತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡಿರುವ ಈ ಆ್ಯಪ್ನ ಸರ್ವರ್ಗಳು ಭಾರತದಲ್ಲೇ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಿಂದ ಡೇಟಾ ಸುರಕ್ಷತೆ ಹಾಗೂ ಸ್ಥಳೀಯ ತಂತ್ರಜ್ಞಾನ ಬೆಂಬಲಕ್ಕೆ ಒತ್ತು ಸಿಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಹಲವು ಸಚಿವರು ಭಾರತೀಯರೇ ನಿರ್ಮಿಸಿದ ತಂತ್ರಜ್ಞಾನ ಹಾಗೂ ಡಿಜಿಟಲ್ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ಈ ಕರೆ, ಅದಕ್ಕೆ ಮತ್ತೊಂದು ಹೆಜ್ಜೆಯಾಗಿದೆಯೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.