ಬಳ್ಳಾರಿ: ಜನನ ಪ್ರಮಾಣ ಪತ್ರ ಕೊಡಿಸುವ ನೆಪದಲ್ಲಿ ಒಂದುವರೆ ತಿಂಗಳ ಮಗುವನ್ನು ಕಳ್ಳತನ ಮಾಡಿದ್ದ ಪ್ರಕರಣ ಬೇಧಿಸಿದ ಬಳ್ಳಾರಿ ಪೊಲೀಸರು ಸೀನಿಮಿಯ ರೀತಿಯಲ್ಲಿ ನಾಲ್ವರು ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದಾರೆ. ಶಮೀಮ್, ಎಚ್.ಎಂ ಇಸ್ಮಾಯಿಲ್, ಭಾಷ, ಬಸವರಾಜ ಮಗು ಕಳ್ಳತನದಲ್ಲಿ ಭಾಗಿಯಾಗಿ ಬಂಧಿತರಾದವರು.
ಬೆಣಕಲ್ಲು ಗ್ರಾಮದ ಶ್ರೀದೇವಿ ಎನ್ನುವವರಿಗೆ ಜುಲೈ 28 ರಂದು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಜನನ ಪ್ರಮಾಣ ಪತ್ರ ಪಡೆಯಲು ಒಂದೂವರೆ ತಿಂಗಳ ಮಗು ಸಹಿತ ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಳು. ಈ ವೇಳೆ ಜನನ ಪ್ರಮಾಣ ಪತ್ರ ಪಾಲಿಕೆಯಲ್ಲಿ ಸಿಗುತ್ತದೆ ಎಂದು ಪುಸಲಾಯಿಸಿ ಶಮೀಮ್ ಎನ್ನುವವರು ಕರೆದು ಕೊಂಡು ಹೋಗಿದ್ದರು. ಪಾಲಿಕೆಯಲ್ಲಿ ಶ್ರೀದೇವಿ ಶೌಚಾಲಯಕ್ಕೆ ಹೋಗಿದ್ದಾಗ ಮಗು ಸಹಿತ ಶಮೀಮ್ ನಾಪತ್ತೆಯಾಗಿದ್ದರು.
ಈ ಕುರಿತು ಶುಕ್ರವಾರ ಶ್ರೀದೇವಿ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಾಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರೂಸ್ಪೇಟೆ ಪೊಲೀಸರು, ಶನಿವಾರ ರಾತ್ರಿ ಹೊತ್ತಿಗೆ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಕದ್ದ ಮಹಿಳೆ ಶಮೀಮ್ ತನ್ನ ಗಂಡ ಇಸ್ಮಾಯಿಲ್ ಮೂಲಕ ಬಾಷ ಅವರೊಂದಿಗೆ ಸೇರಿ ಬಸವರಾಜ್ ಅವರಿಗೆ ಮಾರಾಟ ಮಾಡಿದ್ದರು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.
ತೋರಣಗಲ್ಲು ಮೂಲದ ಬಸವರಾಜ್ ಅವರಿಗೆ ಮಕ್ಕಳಾಗಿಲ್ಲವೆಂದು ಬಾಷ ಅವರ ಹೇಳಿಕೊಂಡಿದ್ದರು. ಇದಕ್ಕಾಗಿ ಬಾಷ ಅವರ ಸಂಬಂಧಿದ ಕೌಲ ಬಜಾರ ನಿವಾಸಿ ಶಮೀಮ್ ಮತ್ತು ಇಸ್ಮಾಯಿಲ್ ಸೇರಿ ಮಗುವನ್ನು ಕಳ್ಳತನ ಮಾಡಿದ್ದರು. ನಿರಂತರ ಪ್ರಯತ್ನದ ಮೂಲಕ ಪೊಲೀಸರು ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಬ್ರೂಸ್ ಪೇಟೆ ಪೊಲೀಸರ ಕಾರ್ಯಕ್ಕೆ ಎಸ್ಪಿ ಡಾ.ಶೋಭರಾಣಿ ವಿಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.