ಸ್ವಪಕ್ಷ ಸಮಾಜದ ಸಚಿವರ ವಿರುದ್ಧ ಕಿಡಿಕಾರಿದ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ
ದಾವಣಗೆರೆ: ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡುತ್ತಿದ್ದು, ಜಾತಿ ಗಣತಿ ವರದಿ ಅನುಷ್ಠಾನದ ವಿರುದ್ಧ ಧ್ವನಿ ಎತ್ತದವರು ಕೂಡಲೇ ರಾಜೀನಾಮೆ ನೀಡಿ ಹೊರ ಬನ್ನಿ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ
ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಏಕೆ ಇಷ್ಟು ಇಷ್ಟ ಪಡುತ್ತೇವೆ ಎಂದರೆ ಸಮಾಜಕ್ಕೆ ಅನ್ಯಾಯವಾಗುತ್ತದೆ ಎನ್ನುವ ತಕ್ಷಣವಸಭೆ ಕರೆದರು. ಆದರೆ ನಮ್ಮ ಲಿಂಗಾಯತ ಸಮಾಜದ ಏಳು ಜನ ಸಚಿವರಿದ್ದರೂ ಧ್ವನಿ ಎತ್ತಿಲ್ಲ. ಶಾಸಕರು ಈ ಬಗ್ಗೆ ಚರ್ಚೆ ಮಾಡಲು ಫೋನ್ ಮಾಡಿದರೂ ಸಚಿವರು ರಿಸೀವ್ ಮಾಡೋಲ್ಲ. ಏಳು ಜನ ಸಚಿವರು ಕೂಡ ಅಸಮರ್ಥರಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮೊನ್ನೆ ಸಚಿವ ಈಶ್ವರ ಖಂಡ್ರೆಯವರಿಗೆ ಕಾಲ್ ಮಾಡಿದರೂ ರಿಸೀವ್ ಮಾಡೋದಿಲ್ಲ. ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಎಂದ ಕೂಡಲೇ ಡಿಕೆಶಿ ಸಭೆ ಮಾಡಿದ್ದಾರೆ. ಈ ಸಮಾಜದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಲಿಂಗಾಯತ ಸಮುದಾಯದ ಸಚಿವರು ಮಾತ್ರ ಚರ್ಚೆ ಮಾಡುತ್ತಿಲ್ಲ ಎಂದು ಸ್ವಪಕ್ಷದ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜಾತಿ ಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆ. ಅವರೆಲ್ಲ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮತ್ತೆ ಜಾತಿಗಣತಿ ಸಮೀಕ್ಷೆ ಪ್ರಾರಂಭ ಮಾಡಬೇಕು. ನಾನು ಕೂಡ ನಮ್ಮ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೆರಡು, ಮೂರು ದಿನಗಳಲ್ಲಿ ವರದಿ ನೀಡುತ್ತೇನೆ ಎಂದರು. ನಾಳೆ ಜಾತಿ ಗಣತಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಿ. ಆದರೆ ಜಾತಿ ಗಣತಿ ವರದಿ ಅನುಷ್ಠಾನ ಮಾಡುವುದು ಬೇಡ. ಎಲ್ಲ್ಲರ ಸಮೀಕ್ಷೆ ಮುಗಿದ ನಂತರ ಅನುಷ್ಠಾನ ಮಾಡಲಿ. ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಕೊಡುವವರು ನಾವು. ಎಲ್ಲಾ ಸಮುದಾಯಕ್ಕೆ ಉತ್ತರ ಕೊಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳವಾರ ಹೇಳಿಕೆ ನೀಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆಗೆ ನನ್ನ ಬೆಂಬಲ ಇದೆ. ಶಿವಶಂಕರಪ್ಪನವರು ಹಿರಿಯರು ಇದ್ದಾರೆ. ಅವರ ಮಾತು ಸತ್ಯ ಇರುತ್ತೆ. ರಾಜಕೀಯ ಮಾಡಲು ಎಲ್ಲಾ ಸಮುದಾಯದವರು ಕೂಡ ಬೇಕು. ಆದರೆ ಹಿರಿಯರು ಸಮಾಜದ ಪರವಾಗಿ ಮಾತನಾಡಿದ್ದಾರೆ ನಾನು ಅವರ ಪರವಾಗಿ ಇದ್ದೇವೆ. ಒಕ್ಕಲಿಗರು, ಲಿಂಗಾಯತರು ಅಷ್ಟೇ ಅಲ್ಲ, ಅನ್ಯಾಯಕ್ಕೆ ಒಳಗಾದ ಸಮಾಜಗಳು ಸೇರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.