ಬೆಂಕಿ ಹಚ್ಚಿ ಯುವತಿಯ ಕೊಲೆ

ಕಾಸರಗೋಡು: ಪೊಲೀಸರಿಗೆ ದೂರು ನೀಡಿದ ವೈಷಮ್ಯದಿಂದ ದುಷ್ಕರ್ಮಿಯೊಬ್ಬ ಅಂಗಡಿಗೆ ನುಗ್ಗಿ ಯುವತಿಗೆ ಬೆಂಕಿ ಹಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಬೇಡಡ್ಕ ನಿವಾಸಿ ರಮಿತಾ ( ೨೨) ಮೃತ ಯುವತಿ. ತಮಿಳುನಾಡು ಮೂಲದ ರಾಮಕೃತ (೫೭) ಬೆಂಕಿ ಹಚ್ಚಿದ ಆರೋಪಿ.
ಮೃತ ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಅಂಗಡಿ ನಡೆಸುತ್ತಿದ್ದಳು. ಆರೋಪಿ ರಾಮಕೃತ ಪಾನಮತ್ತನಾಗಿ ಬಂದು ಆಕೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದಳು. ಇದೇ ಕಾರಣಕ್ಕೆ ವೈಷಮ್ಯದಿಂದ ಎ.೮ ರಂದು ಸಂಜೆ ೩ ಗಂಟೆಗೆ ಅಂಗಡಿಯೊಳಗೆ ನುಗ್ಗಿದ ಆರೋಪಿ ಯುವತಿಗೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದನು. ಕೃತ್ಯ ನಡೆಸಿ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.