ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದಾಗ ಬಾಂಬ್ ಸ್ಫೋಟಗೊಂಡಿದೆ
ಮಂಡ್ಯ: ನಾಡ ಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಜಿಲ್ಲೆಯ, ನಾಗಮಂಗಲ ತಾಲೂಕಿನ ಕಂಬಂಧಳ್ಳಿ ಆಂಜನೇಯ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಎಂದು ತಿಳಿಯಲಾಗಿದ್ದು, ಜೈನ ಬಸದಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛಕಾರ್ಯಕ್ಕಾಗಿ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದ್ದು, ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓರ್ವನ ಅಂಗೈ ಛಿದ್ರವಾಗಿದ್ದು, ಇನ್ನೋರ್ವನ ಮುಖದ ಭಾಗಕ್ಕೆ ಗಾಯವಾಗಿದೆ. ಕಾಡು ಹಂದಿ ಬೇಟೆಗಾಗಿ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳ ಕೆಲಸದಿಂದ ಅಮಾಯಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳಿನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಂಡಿಗನವಿಲೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.