ಚಿಕ್ಕೋಡಿ: ಅತ್ತ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಡಗರ. ಇತ್ತ ಭೂಮಿಯ ಒಡಲಾಳದಲ್ಲಿ ಹುದುಗಿದ್ದ ಪ್ರಭು ಶ್ರೀರಾಮನ ಮಂದಿರ ಗೋಚರವಾಗಿದ್ದು ಸ್ಥಳೀಯ ಭಕ್ತರ ಸಂತಸ ಇಮ್ಮಡಿಗೊಳಿಸಿದೆ.
ನೂರಾರು ವರ್ಷಗಳ ಹಿಂದೆ ಹುದಗಿ ಹೋಗಿದ್ದ ಶ್ರೀರಾಮ ದೇವಸ್ಥಾನವಿದು. ಇದು ಮರ್ಯಾದಾ ಪುರುಷೋತ್ತಮನ ಲೀಲೆಯಲ್ಲದೇ ಮತ್ತೇನೂ ಅಲ್ಲ ಎನ್ನುತ್ತಿದೆ ಭಕ್ತ ವೃಂದ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಈ ಮಂದಿರ ಗೋಚರವಾಗಿದ್ದು, ಸದಲಗಾ ಪಟ್ಟಣದ ಹೊರವಲಯದ ದೂಧಗಂಗಾ ನದಿ ಬಳಿಯ ಪ್ಯಾಟೆ ಹೊಳೆ ಬಳಿ ಪತ್ತೆಯಾಗಿದೆ.
ಸದಲಗಾ ಪಟ್ಟಣದ ಹಿಂದು ಸಮುದಾಯದಿಂದ ಉತ್ಖನನ ಕಾರ್ಯ ನಡೆದಿದ್ದು, ನಮ್ಮ ಹಿರಿಯರು ಇಲ್ಲಿ ಪ್ರಭು ಶ್ರೀರಾಮ ಮಂದಿರ ಇದೆ ಎಂದು ಹೇಳ್ತಿದ್ರು. ಅತಿವೃಷ್ಟಿಯಂತಹ ಸಂದರ್ಭದಲ್ಲಿ ಪ್ರಭು ಶ್ರೀರಾಮರ ಮಂದಿರ ನೆಲದಾಳದಲ್ಲಿ ಮುಚ್ಚಿ ಹೋಗಿದೆ ಎಂದು ಹೇಳ್ತಿದ್ರು. ಹೀಗಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ದೇವಸ್ಥಾನದ ಇದ್ದ ಸ್ಥಳದಲ್ಲಿ ಉತ್ಖನನ ಮಾಡಿದೆವು ಎನ್ನುತ್ತಾರೆ ಸ್ಥಳೀಯರು.