ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪಾಲ್ಗೊಳ್ಳುವ ಗಜಪಡೆಯ ಆನೆಗಳ ತೂಕ ಪರೀಕ್ಷೆಯನ್ನು ಅರಣ್ಯ ಇಲಾಖೆ ನಡೆಸಿದೆ. ಮೊದಲ ಹಂತದ 9 ಆನೆಗಳಲ್ಲಿ ಶ್ರೀಕಂಠ 5,790 ಕೆಜಿ ತೂಕ ಹೊಂದಿ ಬಲಭೀಮ ಎನಿಸಿಕೊಂಡಿದೆ.
ಇದೇ ವೇಳೆ ಕಾವೇರಿ 3,075 ಕೆಜಿ ಅತಿ ಕಡಿಮೆ ತೂಕ ಹೊಂದಿದೆ. ಇನ್ನುಳಿದಂತೆ ಮಹೇಂದ್ರ 5,490 ಕೆಜಿ, ಲಕ್ಷ್ಮಿ 3,990 ಕೆಜಿ, ಪ್ರಶಾಂತ 5,205 ಕೆಜಿ, ಧನಂಜಯ 5,530 ಕೆಜಿ, ಶ್ರೀರಾಮ 4,820 ಕೆಜಿ, ಏಕಲವ್ಯ 5,600 ಕೆಜಿ ಮತ್ತು ಗೋಪಿ 5170 ಕೆಜಿ ದಾಖಲಿಸಿವೆ.
ತೂಕಕ್ಕಿಂತ ಆರೋಗ್ಯಕ್ಕೆ ಕಾಳಜಿ:
ಈ ಬಾರಿ ತೂಕ ಹೆಚ್ಚಳಕ್ಕಿಂತ ಆರೋಗ್ಯ ಕಾಪಾಡುವ ಆಹಾರ ಅನುಸರಿಸಲು ಅರಣ್ಯ ಇಲಾಖೆ ಮುಂದಾಗಿದೆ. ವೈದ್ಯರು ಮತ್ತು ತಜ್ಞರ ಸಲಹೆ ಪೆಡದು ಆಹಾರ ಪಟ್ಟಿ ತಯಾರಿಸಲು ಇಲಾಖೆ ಮುಂದಾಗಿದೆ.
ಪ್ರತಿ ವರ್ಷ ದಸರಾ ಆನೆಗಳಿಗೆ ಅರಮನೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಪೌಷ್ಠಿಕ ಆಹಾರದಿಂದ 300 ಕೆಜಿ ರಿಂದ 550 ಕೆಜಿ ತೂಕ ಹೆಚ್ಚಾಗುತ್ತಿದ್ದು, ಏಕಾಏಕಿ ದೇಹದ ತೂಕ ದೊಡ್ಡ ಮಟ್ಟದಲ್ಲಿ ಏರಿಕೆಯಾದರೆ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಬಗ್ಗೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಆ ಕಾರಣದಿಂದ ಈ ಬಾರಿ ತೂಕ ಹೆಚ್ಚಳಕ್ಕಿಂತ ಆರೋಗ್ಯ ಕಡೆಗೆ ಗಮನ ಕೊಡಲು ಅಗತ್ಯ ಪ್ರಮಾಣದ ಆಹಾರ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ದಸರಾ ಗಜಪಡೆಗೆ ಅವುಗಳ ವಯಸ್ಸು, ತೂಕ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತು ವೈಜ್ಞಾನಿಕ ಪ್ರಮಾಣದಲ್ಲಿ ಎಷ್ಟು ಪೌಷ್ಠಿಕ ಆಹಾರ ನೀಡಬೇಕು ಎಂದು ನುರಿತ ಪಶು ವೈದ್ಯರಿಂದ ಸಲಹೆ ಪಡೆದು ಈ ಬಾರಿ ಆನೆಗಳಿಗೆ ಆಹಾರ ಪ್ರಮಾಣ ನಿಗದಿ ಪಡಿಸುವ ಕುರಿತು ಚಿಂತನೆ ಮಾಡಲಾಯಿತು.
ಈಗಾಗಲೇ ಅರಮನೆ ಪ್ರವೇಶಿಸಿರುವ ಆನೆಗಳಿಗೆ ಇನ್ನು ಪೌಷ್ಠಿಕ ಆಹಾರ ನೀಡಿಲ್ಲ, 3-4 ದಿನಗಳ ನಂತರ ಹಂತ ಹಂತವಾಗಿ ಅವುಗಳ ತೂಕಗಳ ಅನ್ವಯ ಯಾವ ಆನೆಗೆ ಎಷ್ಟು ಪ್ರಮಾಣದ ಪೌಷ್ಠಿಕ ಆಹಾರ ನೀಡಬೇಕೆಂದು ನಿರ್ಧರಿಸಿದ್ದಾರೆ.
ತೂಕ ಹೆಚ್ಚಳ ಒಳಿತಲ್ಲ:
ದಸರಾ ಆನೆಗಳಿಗೆ ನೀಡುವ ಪೌಷ್ಠಿಕ ಆಹಾರದಿಂದ ಅವುಗಳ ತೂಕದಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬಿರುವು ಸಾಧ್ಯತೆ ಹೆಚ್ಚಾಗಿದೆ. ಮೊದಲ ತಂಡದ ಆನೆಗಳು ಎರಡು ತಿಂಗಳು ಮತ್ತು ಎರಡನೇ ತಂಡದ ಆನೆಗಳು 40 ದಿನ ಮೈಸೂರು ಅರಮನೆ ಆವರಣದಲ್ಲಿ ಇರಲಿವೆ. ಈ ಅವಧಿಯಲ್ಲಿ ಪ್ರತಿಯೊಂದು ಆನೆಗಳು ತೂಕ ಹೆಚ್ಚಿಸಿಕೊಳ್ಳುತ್ತವೆ. ಅದರಲ್ಲಿ ಕೆಲವು 300 ರಿಂದ 550 ವರೆಗೆ ತೂಕ ಹೆಚ್ಚು ಮಾಡಿಕೊಳ್ಳುತ್ತವೆ. ಈ ಆನೆಗಳು ವಾಪಸ್ ಕ್ಯಾಂಪ್ಗೆ ಮರಳಿದಾಗ ಅವುಗಳಿಗೆ ಪೌಷ್ಠಿಕ ಆಹಾರ ಕೊರತೆಯಾಗಿ ಆರೋಗ್ಯದಲ್ಲಿ ಏರುಪೇರು ಆಗಿ ಆನೆಗಳ ಆರೋಗ್ಯದ ಮೇಲೆ ಪರಿಣಾಮ ಬಿರುವ ಸಾಧ್ಯತೆ ಇದೆ. ಅದಕ್ಕಾಗಿ ಈ ಬಾರಿ ತೂಕ ಹೆಚ್ಚಳ ನೋಡದೆ ಆರೋಗ್ಯ ಕಾಪಾಡುವುದಕ್ಕೆ ಬೇಕಾದ ವ್ಯವಸ್ಥೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
–ಸಾರಿಕಾ ಪುಜಾರಿ




















