ಮಂಗಳೂರು: ಬಂಟ್ವಾಳ ಬಿ.ಸಿ. ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಬಸ್ಸಿನಿಂದ ಹೊರಗೆಳೆದು ಯದ್ವಾತದ್ವಾ ಕತ್ತಿಯಿಂದ ದಾಳಿ ನಡೆಸಿ ಸಾರ್ವಜನಿಕರ ಎದುರಲ್ಲೇ ಹತ್ಯೆಗೈದ ಘಟನೆ ಗುರುವಾರ ಸಂಜೆ ನಡೆದಿದೆ.
ಸುಮಾರು 25 ವರ್ಷದ ಕಕ್ಯಪದವು ನಿವಾಸಿ ಲಾವಣ್ಯ ಎಂಬ ಯುವತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬಿ.ಸಿ. ರೋಡಿನಿಂದ ಕಕ್ಯಪದವು ಹೋಗುವ ಸರಕಾರಿ ಬಸ್ಸಿನಲ್ಲಿ ಯುವತಿ ಕುಳಿತಿದ್ದಾಗ ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಕತ್ತಿಯಿಂದ ದಾಳಿ ನಡೆಸಿದ್ದಾನೆ.
ಯುವತಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದು ಬಳಿಕ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಜೆ ಆರು ಗಂಟೆ ವೇಳೆಗೆ ಘಟನೆ ನಡೆದಿದ್ದು ಕೃತ್ಯದ ಬೆನ್ನಲ್ಲೇ ಆರೋಪಿ ಚೇತನ್ ಪರಾರಿಯಾಗಿದ್ದಾನೆ. ಆರೋಪಿ ಚೇತನ್ ಯುವತಿಯ ಸಂಬಂಧಿ ಎನ್ನಲಾಗಿದೆ. ಪ್ರೀತಿ ನಿರಾಕರಣೆಯ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಯುವತಿ ಕಲ್ಲಡ್ಕದಲ್ಲಿ ಕೆಲಸ ಮಾಡುತ್ತಿದ್ದು ಸಂಜೆ ಎಂದಿನಂತೆ ಬಸ್ಸಿನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ. ದಕ್ಷಿಣ ಕನ್ನಡ ಎಸ್ಪಿ ಅರುಣ್ ಕುಮಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯುವಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.






















