SK Home Ad
Home ನಮ್ಮ ಜಿಲ್ಲೆ ಉಡುಪಿ ಕೊಲ್ಲೂರಿಗೆ ವಿಜಯ್ ನೇರ ಪಯಣ: ಉಡುಪಿ ಅಭಿಮಾನಿಗಳಿಗೆ ನಿರಾಸೆ

ಕೊಲ್ಲೂರಿಗೆ ವಿಜಯ್ ನೇರ ಪಯಣ: ಉಡುಪಿ ಅಭಿಮಾನಿಗಳಿಗೆ ನಿರಾಸೆ

0
50

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಶುಕ್ರವಾರ ಕರಾವಳಿ ಭಾಗಕ್ಕೆ ಆಗಮಿಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೂಲ ವೇಳಾಪಟ್ಟಿಯ ಪ್ರಕಾರ, ವಿಜಯ್ ಉಡುಪಿಗೆ ಆಗಮಿಸಿದ ಬಳಿಕ ಕರಾವಳಿ ಬೈಪಾಸ್ ಸಮೀಪದ ಖಾಸಗಿ ಹೋಟೆಲ್‌ಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು ಬಳಿಕ ಕೊಲ್ಲೂರಿಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ, ಸಮಯದ ಅಭಾವದಿಂದಾಗಿ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕೊಲ್ಲೂರಿಗೆ ತೆರಳಿದರು.

ಈ ಹಠಾತ್ ಬದಲಾವಣೆಯಿಂದ ಉಡುಪಿಯ ಖಾಸಗಿ ಹೋಟೆಲ್ ಬಳಿ ಹಾಗೂ ಮಾರ್ಗದುದ್ದಕ್ಕೂ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ನಿರಾಸೆ ಉಂಟಾಯಿತು. ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ ಅವರಿಗೆ ಶುಭ ಹಾರೈಸುವ ತವಕ ಹಾಗೂ ನಿರೀಕ್ಷೆಯಲ್ಲಿ ಹಲವರು ಕಾದು ಕುಳಿತಿದ್ದರು.

ತಮಿಳುನಾಡು ಮುಖ್ಯಮಂತ್ರಿಯನ್ನು ಸ್ವಾಗತಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಬೆಂಬಲಿಗರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.