ಉತ್ತರ ಪತ್ರಿಕೆ ಮರುಪರಿಶೀಲನಾ ಶುಲ್ಕ ಕಡಿತ ಘೋಷಿಸಿದ CBSE
ನವದೆಹಲಿ: ವಿದ್ಯಾರ್ಥಿ ಸ್ನೇಹಿ ಕ್ರಮವಾಗಿ CBSE ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಈ ಹಿಂದೆ ₹700 ಮತ್ತು ₹500 ವರೆಗೆ ಇದ್ದ ಶುಲ್ಕವನ್ನು ಇದೀಗ ಕೇವಲ ₹100ಕ್ಕೆ ಇಳಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಈ ನಿರ್ಧಾರಕ್ಕೆ ಸ್ವಾಗತ ವ್ಯಕ್ತವಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, “ತಮ್ಮ ಉತ್ತರ ಪತ್ರಿಕೆಗಳನ್ನು ವೀಕ್ಷಿಸಲು ಬಯಸುವ ಯಾವುದೇ ವಿದ್ಯಾರ್ಥಿಯಿಂದ ₹100 ಶುಲ್ಕ ಪಡೆಯಲಾಗುತ್ತದೆ. ಉತ್ತರ ಪತ್ರಿಕೆಯ ಮೌಲ್ಯೀಕರಣ ಪರಿಶೀಲನೆಗೂ ₹100 ಪ್ರತ್ಯೇಕ ಶುಲ್ಕ ಅನ್ವಯಿಸುತ್ತದೆ. ಯಾವುದೇ ನಿರ್ದಿಷ್ಟ ಪ್ರಶ್ನೆಯ ಉತ್ತರವನ್ನು ಮರು ಪರಿಶೀಲಿಸಲು ₹25 ಶುಲ್ಕ ವಿಧಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಇದಲ್ಲದೆ, ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ ಅಂಕಗಳು ಹೆಚ್ಚಾದರೆ ಅಥವಾ ಮೇಲಕ್ಕೆ ಪರಿಷ್ಕೃತವಾದರೆ, ವಿದ್ಯಾರ್ಥಿಯಿಂದ ಪಡೆದ ಮರುಮೌಲ್ಯಮಾಪನ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
“ಶಿಕ್ಷಣ ಸಚಿವಾಲಯವಾಗಲಿ ಅಥವಾ ಸಿಬಿಎಸ್ಇ ಆಗಿರಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ಕಲ್ಯಾಣ ಮತ್ತು ಕಾಳಜಿ ನಮಗೆ ಅತ್ಯಂತ ಮುಖ್ಯ. ಯಾವುದೇ ವಿದ್ಯಾರ್ಥಿಯು ತನ್ನ ನಿಜವಾದ ಕಾರ್ಯಕ್ಷಮತಿಗಿಂತ ಕಡಿಮೆ ಅಂಕ ಪಡೆದಿದ್ದೇನೆ ಎಂದು ಭಾವಿಸಬಾರದು. ಅಂಕಗಳ ಒಟ್ಟು ಮೊತ್ತದಿಂದ ಹಿಡಿದು ಮೌಲ್ಯಮಾಪನದ ಪ್ರತಿಯೊಂದು ಹಂತವೂ ನಿಖರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ” ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನ್-ಸ್ಕ್ರೀನ್ ಮೌಲ್ಯಮಾಪನ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಕೆಲವು ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆ, ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಿಬಿಎಸ್ಇ ವಿದ್ಯಾರ್ಥಿಗಳ ಪ್ರಶ್ನೆಗಳು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಹಲವಾರು ಹೊಸ ಸೌಲಭ್ಯಗಳನ್ನು ಕೂಡ ಘೋಷಿಸಿದೆ. ಪರೀಕ್ಷೆ, ಫಲಿತಾಂಶ ಮತ್ತು ಮೌಲ್ಯಮಾಪನ ಸಂಬಂಧಿತ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ಟೆಲಿ-ಕೌನ್ಸೆಲಿಂಗ್ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕರೆಗಳಿಗೆ ಪರ್ಯಾಯವಾಗಿ ಇಮೇಲ್ ಸೇವೆಯನ್ನೂ ಒದಗಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ವೇದಿಕೆಗಳ ಮೂಲಕ ತಮ್ಮ ಪ್ರಶ್ನೆಗಳು, ಅನುಮಾನಗಳು ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಬಹುದು ಎಂದು ಮಂಡಳಿ ತಿಳಿಸಿದೆ.
ಸಿಬಿಎಸ್ಇ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿ, ಫಲಿತಾಂಶದ ನಂತರದ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸಹಾಯ ಮತ್ತು ಸ್ಪಷ್ಟನೆ ನೀಡಲು ಬದ್ಧವಾಗಿರುವುದಾಗಿ ತಿಳಿಸಿದೆ.
ಈ ಕ್ರಮದಿಂದ ವಿಶೇಷವಾಗಿ ಮರುಮೌಲ್ಯಮಾಪನ ವೆಚ್ಚದ ಬಗ್ಗೆ ಆತಂಕ ಹೊಂದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




















