Home Advertisement
Home ಕ್ರೀಡೆ RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ.

RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ.

0
30

ಬೆಂಗಳೂರು: ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರಿನ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಬರಬಾರದು. ಅದಾಗಿಯೂ ಬಂದಲ್ಲಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗಿದೆ. ಕಳೆದ ಪಂದ್ಯದಲ್ಲಿ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ, ನಾಳೆ ಪಂದ್ಯವನ್ನು ವೀಕ್ಷಿಸಲು ಬರಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಗಳನ್ನು ಬಳಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೂರ್ವಭಾವಿಯಾಗಿ ಸಂಭವಿಸಿದ ಘಟನೆಗಳ ನಡುವೆ ಕೆಲವರ ಮೊಬೈಲ್ ಕಳ್ಳತನ ಕೂಡ ಸೇರಿದೆ. ಕಳೆದ ಪಂದ್ಯದ ವೇಳೆ ಸುಮಾರು 71 ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಬಹುತೇಕ ಕೃತ್ಯ ಹೊರ ರಾಜ್ಯದಿಂದ ಬಂದ ವ್ಯಕ್ತಿಗಳಿಂದ ನಡೆದಿದ್ದರಿಂದ, ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ವಸ್ತುಗಳು ಮತ್ತು ಮೊಬೈಲ್‌ಗಳು ಸುರಕ್ಷಿತವಾಗಿರಲು ಎಚ್ಚರಿಕೆ ನೀಡಲಾಗಿದೆ.

ಇದಲ್ಲದೆ, ನಾಳೆ ಪಂದ್ಯಾವಳಿಯ ಪ್ರಯುಕ್ತ ಮೆಟ್ರೋ ರೈಲುಗಳ ಸಂಚಾರ ಸಮಯವನ್ನು ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಪ್ರಕಟಣೆ ಪ್ರಕಾರ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆಯವರೆಗೆ ನಿರ್ವಹಿಸಲಿದ್ದು, ವೈಟ್‌ಫೀಲ್ಡ್ (ಕಾಡುಗೋಡಿ) ಯಿಂದ 12:30 AM, ಚೆಲ್ಲಘಟ್ಟದಿಂದ 12:45 AM, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ 12:45 AM, ಬೊಮ್ಮಸಂದ್ರದಿಂದ 12:30 AM, ಆರ್.ವಿ. ರಸ್ತೆಯಿಂದ 2:00 AM, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಪೊಲೀಸ್ ಇಲಾಖೆ ಅಭಿಮಾನಿಗಳಿಗೆ ಸುಲಭ, ಸುರಕ್ಷಿತ ಹಾಗೂ ಅಹಿತಕರ ಘಟನೆಗಳಿಂದ ಮುಕ್ತ ಪ್ರಯಾಣಕ್ಕೆ ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಅವರ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ.