Home Advertisement
Home ನಮ್ಮ ಜಿಲ್ಲೆ ಬೆಂಗಳೂರು 5ರಂದು ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯಿಂದ ಗೆಜ್ಜೆಪೂಜೆ

5ರಂದು ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯಿಂದ ಗೆಜ್ಜೆಪೂಜೆ

0
47

ಬೆಂಗಳೂರು: ರಾಜಧಾನಿಯ ಸುಂಕದಕಟ್ಟೆಯ ಸಂಯೋಗ – ಕನೆಕ್ಟಿಂಗ್ ಆರ್ಟ್ಸ್ ಕಲಾ ಶಾಲೆಯ ಹಿರಿಯ ಭರತನಾಟ್ಯ ವಿದುಷಿ ಲತಾ ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ 7 ಜನ ಯುವ ನರ್ತಕಿಯರ ಗೆಜ್ಜೆಪೂಜೆ ಕಾರ್ಯಕ್ರಮ ಏ. 5 ರಂದು ಆಯೋಜನೆಗೊಂಡಿದೆ.

ನಗರದ ಯಲಹಂಕ ಸ್ಯಾಟಲೈಟ್ ಟೌನ್‌ನ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಸಂಜೆ 4ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಹಿರಿಯ ಭರತನಾಟ್ಯ ಕಲಾವಿದೆ ರೂಪಶ್ರೀ ಮಧುಸೂದನ ಮತ್ತು ಶಾಸಕ ಗೋಪಾಲಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಮತ್ತು ಯೋಗ ಗುರು ಲಕ್ಷ್ಮೀಶ ಹೆಗಡೆ ಹೊಸಾಕುಳಿ ಉಪಸ್ಥಿತರಿರುತ್ತಾರೆ.

ಸಪ್ತ ಯುವ ನರ್ತಕಿಯರು: ಚಂದ್ರಶೇಖರ ಮತ್ತು ಸುಕನ್ಯಾರ ಪತ್ರಿ ಎಸ್.ಸಿ. ಅಕ್ಷರಾ, ಮಂಜುನಾಥ ಮತ್ತು ಶಿಲ್ಪ ಅವರ ಪುತ್ರಿ ಎಂ. ದಿಯಾ, ಪುಟ್ಟವೀರಪ್ಪ ಮತ್ತು ಭವ್ಯಾ ಅವರ ಪುತ್ರಿ ಪಿ ಕಾಶ್ವಿ, ಕೃಷ್ಣ ಮತ್ತು ಸಂಧ್ಯಾರ ಪುತ್ರಿ ನಿಹಾರಿಕಾ, ರಮೇಶ ಮತ್ತು ಸವಿತಾರ ಪುತ್ರಿ ಪ್ರಣೀತಾ, ಪೆರುಮಾಳ್ ಮತ್ತು ಅಶ್ವಿನಿ ಪುತ್ರಿ ಪ್ರಿಯಾಂಕಾ ದೇವಿ, ಶ್ರೀನಿವಾಸ ಮತ್ತು ಹೇಮಾರ ಪುತ್ರಿ ಪೂಜಿತಾ ಅವರು ಲಾಸ್ಯರಂಜನಾ ಸರಣಿ 3ನೇ ಕುಸುಮ ಸಮರ್ಪಣೆಯ ಸಂದರ್ಭದಲ್ಲಿ ಗುರುಗಳ ಸಮ್ಮುಖ ಗೆಜ್ಜೆಪೂಜೆ ಮಾಡಿಸಿಕೊಂಡು ವಿಶೇಷ ನೃತ್ಯ ಪ್ರಸ್ತುತಪಡಿಸಲಿದ್ದಾರೆ.

ಹಿಮ್ಮೇಳದಲ್ಲಿ ವಿದ್ವಾಂಸರು: ನಟುವಾಂಗದಲ್ಲಿ ಗುರು ಲತಾ ಲಕ್ಷ್ಮೀಶ, ಗಾಯನದಲ್ಲಿ ವಿದ್ವಾಂಸರಾದ ನಂದಕುಮಾರ್, ಮೃದಂಗದಲ್ಲಿ ಜನಾರ್ಧನ, ಕೊಳಲಿನಲ್ಲಿ ರಾಕೇಶ್ ಸುಧೀರ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ರಿದಂ ಪ್ಯಾಡ್‌ನಲ್ಲಿ ಭಾರ್ಗವ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಸಹಕಾರ ನೀಡಲಿದ್ದಾರೆ.

ಕಲಾ ಸೇವೆಯಲ್ಲಿ ವಿದುಷಿ ಲತಾ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಭೀಮನಕೋಣೆ ಮೂಲದ ವಿದುಷಿ ಲತಾ ಅವರು ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೂರಾರು ಮಕ್ಕಳಿಗೆ ನರ್ತನ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಈವರೆಗೆ ತಮ್ಮ 23 ಶಿಷ್ಠೆಯರ ರಂಗ ಪ್ರವೇಶ ಮಾಡಿಸಿ ಕಲಾ ರಂಗಕ್ಕೆ ಮಹತ್ತರ ಕಾಣಿಕೆ ನೀಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ವಿವಿಧ ಪ್ರತಿಷ್ಠಿತ ವೇದಿಕೆಗಳೂ ಸೇರಿದಂತೆ ಹೊರ ರಾಜ್ಯದಲ್ಲೂ ಲತಾ ಅವರ ಕಲಾ ಪ್ರೌಢಿಮೆ ಅನಾವರಣಗೊಂಡಿದೆ. 3 ದಶಕಗಳ ಸುದೀರ್ಘ ಲಾ ಸೇವೆಗಾಗಿ ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರ ಅರಸಿ ಬಂದಿವೆ. ಪತಿ ಮತ್ತು ಕಲಾವಿದ ಲಕ್ಷ್ಮೀಶ ಅವರ ಸಹಕಾರದಲ್ಲಿ ಲಾಸ್ಯ ರಂಜನಾ ಸರಣಿ ಮೂಲಕ ಅವರು ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಿ ಅರಳು ಪ್ರತಿಭೆಗಳಿಗೆ ವಿಶೇಷ ವೇದಿಕೆ ಕಲ್ಪಿಸುವಲ್ಲಿ ಬಹು ಆಸಕ್ತಿಯಿಂದಲೇ ಶ್ರಮಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.