ದಾವಣಗೆರೆ(ಜಗಳೂರು): ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಹಿರೇಮಲ್ಲನಹೊಳೆ ಕ್ರಾಸ್ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಹಾಸನ ಮೂಲದ ಪವರ್ ಮೆಲೋಡಿ (26) ಮೃತಪಟ್ಟ ಯುವಕ. ಗಾಯಗೊಂಡಿರುವ ಇನ್ನಿಬ್ಬರು ಬೀದರ್, ಕೋಲಾರದವರು ಎಂದು ತಿಳಿದು ಬಂದಿದೆ.
ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಡಿಕ್ಕಿ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಖಾಸಗಿ ಶಿಕ್ಷಣ ಅಕಾಡೆಮಿಯಲ್ಲಿ ರೋಬೋಟ್ ಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದ ಈ ಮೂವರು ಕಾರಿನಲ್ಲಿ ಸೊಂಡೂರು ಕಡೆಯಿಂದ ಜಗಳೂರು ಕಡೆ ಪ್ರಯಾಣ ಬೆಳೆಸಿದ್ದರು. ಇಬ್ಬರು ಗಾಯಗೊಂಡಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಜಗಳೂರು ಪೊಲೀಸ್ ಠಾಣೆ ಪಿಐ ಸಿದ್ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















