ತಿರುವನಂತಪುರ: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಅವರಿಗೆ ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಸೋಮವಾರ ಬಿಗ್ ರಿಲೀಫ್ ನೀಡಿದೆ. ನ್ಯಾಯಾಲಯವು ದಿಲೀಪ್ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಖುಲಾಸೆಯ ನಂತರ ತಕ್ಷಣವೇ ಪ್ರತಿಕ್ರಿಯಿಸಿದ ನಟ ದಿಲೀಪ್, 2017ರಲ್ಲಿ ನಡೆದ ಈ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಪೊಲೀಸ್ ಅಧಿಕಾರಿಗಳು ಮತ್ತು ಕೆಲವು ಮಾಧ್ಯಮಗಳ ಸಹಯೋಗದೊಂದಿಗೆ ವ್ಯವಸ್ಥಿತ ಪಿತೂರಿ ನಡೆಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
“ನನ್ನ ವೃತ್ತಿಜೀವನವನ್ನು ಹಾಳು ಮಾಡುವ ಉದ್ದೇಶದಿಂದ ಕೆಲವು ಮಾಧ್ಯಮದವರು ಹಾಗೂ ಪೊಲೀಸ್ ಅಧಿಕಾರಿಗಳು ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮತ್ತು ಜೈಲಿನಲ್ಲಿರುವ ಆತನ ಸಹ ಕೈದಿಯ ಬೆಂಬಲದೊಂದಿಗೆ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ಸುಳ್ಳು ಕಥೆಗಳನ್ನು ಹೆಣೆದಿದ್ದರು ಎಂದು ದಿಲೀಪ್ ಆರೋಪಿಸಿದರು.
ಆದರೆ, ಪೊಲೀಸರು ಹೆಣೆದ ಈ ಸುಳ್ಳು ಕಥೆಗೆ ನ್ಯಾಯಾಲಯವು ಕಿವಿಗೊಟ್ಟಿಲ್ಲ ಎಂದು ದಿಲೀಪ್ ಸಂತೋಷ ವ್ಯಕ್ತಪಡಿಸಿದರು. ಕಾನೂನು ಹೋರಾಟದಲ್ಲಿ ತಮ್ಮ ಜೊತೆ ನಿಂತ ಕುಟುಂಬಸ್ಥರು, ವಕೀಲರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಇದೇ ವೇಳೆ, ಈ ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. “ಸಮಾಜದಲ್ಲಿ ನನಗಿರುವ ಘನತೆ ಮತ್ತು ವೃತ್ತಿಜೀವನವನ್ನು ಹಾಳು ಮಾಡಲು ಕ್ರಿಮಿನಲ್ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು,” ಎಂದು ದಿಲೀಪ್ ಒತ್ತಾಯಿಸಿದರು.
ನ್ಯಾಯಾಲಯದ ತೀರ್ಪಿನಲ್ಲಿ ದಿಲೀಪ್ ಖುಲಾಸೆಯಾಗಿದ್ದರೂ, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುನೀಲ್ ಎನ್.ಎಸ್ ಅಲಿಯಾಸ್ ಪಲರ್ ಸುನಿ ಸೇರಿದಂತೆ ಒಟ್ಟು ಆರು ಜನರನ್ನು ತಪ್ಪಿತಸ್ಥರು ಎಂದು ಘೋಷಿಸಲಾಗಿದೆ.
2017ರ ಫೆಬ್ರುವರಿ 17ರಂದು ಈ ಘಟನೆ ನಡೆದಿತ್ತು. ಹಾಗೇ ಅದೇ ವರ್ಷ ಜುಲೈ 10ರಂದು ಬಂಧಿಸಲಾಗಿತ್ತು, ನಂತರ ದಿಲೀಪ್ ಜಾಮೀನಿನ ಮೇಲೆ ಹೊರಬಂದಿದ್ದರು.























