Dasara 2025. ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಬೆಂಗಳೂರು ನಗರದಿಂದ ಓಡಿಸಲಿದೆ. ಈ ರೈಲುಗಳ ವೇಳಾಪಟ್ಟಿಯನ್ನು ಜನರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ‘ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದ್ದಾರೆ.
‘ಹಾಗೆಯೇ, ಸತ್ಯಸಾಯಿ ಬಾಬಾ ಆಶ್ರಮಕ್ಕೆ ಶತಮಾನೋತ್ಸವ ಆಚರಣೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ನವೆಂಬರ್ 20 ರಿಂದ 27ರ ವರೆಗೆ 7 ದಿನಗಳ ಕಾಲ ಮಚಲಿಪಟ್ಟಣಂ – ಧರ್ಮಾವರಂ ರೈಲನ್ನು ವಿಸ್ತರಣೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಪ್ರಯಾಣಿಕರು ಹಾಗೂ ಭಕ್ತಾಧಿಗಳು ಈ ವಿಶೇಷ ರೈಲು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ’ ಎಂದು ಸಚಿವರು ಹೇಳಿದ್ದು, ವೇಳಾಪಟ್ಟಿಯನ್ನು ಸಹ ಪೋಸ್ಟ್ನಲ್ಲಿ ಹಾಕಿದ್ದಾರೆ.
ವಿಶೇಷ ರೈಲುಗಳ ವಿವರ
- ಯಶವಂತಪುರ –ಮಂಗಳೂರು ಜಂಕ್ಷನ್ (06217/ 06218). ಅಕ್ಟೋಬರ್ 02ರಂದು ಬೆಂಗಳೂರಿನ ಯಶವಂತಪುರದಿಂದ ಹಾಗೂ ಅಕ್ಟೋಬರ್ 03ರಂದು ಮಂಗಳೂರು ಜ೦ಕ್ಷನ್ನಿಂದ ರೈಲು ಹೊರಡಲಿದೆ.
- ಎಸ್ಎಂಬಿಬಿ-ಬೆಳಗಾವಿ ಎಕ್ಸ್ಪ್ರೆಸ್ (06503/ 06504). ಅಕ್ಟೋಬರ್ 17ರಂದು ಬೆಂಗಳೂರಿನಿಂದ (SMVB) ಹಾಗೂ ಅಕ್ಟೋಬರ್ 22ರಂದು ಬೆಳಗಾವಿಯಿಂದ ರೈಲು ಹೊರಡಲಿದೆ.
- ಎಸ್ಎಂವಿಬಿ-ವಿಜಯಪುರ (06245/ 06246). ಅಕ್ಟೋಬರ್ 17ರಂದು ಬೆಂಗಳೂರಿನಿಂದ (SMVB) ಹಾಗೂ ಅಕ್ಟೋಬರ್ 22ರಂದು ವಿಜಯಪುರದಿಂದ ರೈಲು ಹೊರಡಲಿದೆ.
- ಹುಬ್ಬಳ್ಳಿ-ಎಸ್ಎಂವಿಬಿ ಏಕಮಾರ್ಗ ಎಕ್ಸ್ಪ್ರೆಸ್ (07345). ಅಕ್ಟೋಬರ್ 17ರಂದು ಹುಬ್ಬಳ್ಳಿಯಿಂದ ರೈಲು ಹೊರಡಲಿದೆ.
- ಮಚಲಿಪಟ್ಟಣಂ –ಧರ್ಮವರಂ ರೈಲು (17215/ 17216) ಹಿಂದೂಪುರದವರೆಗೆ ವಿಸ್ತರಣೆ. ಸತ್ಯಸಾಯಿ ಬಾಬಾ ಆಶ್ರಮಕ್ಕೆ ಶತಮಾನೋತ್ಸವ ಆಚರಣೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ನವೆ೦ಬರ್ 20ರಿಂದ 27ರ ವರೆಗೆ 7 ದಿನಗಳ ಕಾಲ ಮಚಲಿಪಟ್ಟಣಂ-ಧರ್ಮಾವರಂ ರೈಲನ್ನು ವಿಸ್ತರಣೆ ಮಾಡಲಾಗಿದೆ.