ಚಿಕ್ಕಮಗಳೂರು: ಸರ್ವೆ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೂಡಿಗೆರೆ ಸರ್ವೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್(45) ಮೃತ ದುರ್ದೈವಿಯಾಗಿದ್ದು, ಇವರು ತುಮಕೂರು ಜಿಲ್ಲೆಯ ಗುಬ್ಬಿ ಮೂಲದವರಾಗಿದ್ದಾರೆ. ಮೂಡಿಗೆರೆ ಬಸ್ ನಿಲ್ದಾಣದ ಬಳಿಯ ಬಾಡಿಗೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದಲಾದ ಸಿಮ್: ಚಿಕ್ಕಮಗಳೂರು ನೌಕರರ ಸಂಘದ ನಿರ್ದೇಶಕರು ಆಗಿದ್ದ ಶಿವಕುಮಾರ್ ನಿನ್ನೆಯಷ್ಟೇ ಹೊಸ ಸಿಮ್ ಖರೀದಿ ಮಾಡಿದ್ದರು, ಅವರು 10 ವರ್ಷಗಳಿಂದ ಬಳಸುತ್ತಿದ್ದ ಸಿಮ್ನ್ನು ಚೇಂಜ್ ಮಾಡಿದ್ದರು. ಸದ್ಯ ಸರ್ವೆ ಅಧಿಕಾರಿಯ ಆತ್ಮಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಮನೆ ಬಳಿ ಯಾರನ್ನೂ ಬಿಡದೆ ಬ್ಯಾರಿಕೇಡ್ ಹಾಕಿದ್ದು, ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.