Home Advertisement
Home ನಮ್ಮ ಜಿಲ್ಲೆ ಗದಗ ಗ್ಯಾರಂಟಿಯಿಂದ ಯಾವ ಅಭಿವೃದ್ಧಿ ನಿಂತಿದೆ? ಸಿಎಂ ಸವಾಲು

ಗ್ಯಾರಂಟಿಯಿಂದ ಯಾವ ಅಭಿವೃದ್ಧಿ ನಿಂತಿದೆ? ಸಿಎಂ ಸವಾಲು

0
104

ಗದಗ: ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ, ಖಜಾನೆ ಖಾಲಿಯಾಗಿದೆಯೆಂದು ಬಿಜೆಪಿ, ಜೆಡಿಎಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಎಲ್ಲಿ ಅಭಿವೃದ್ಧಿ ನಿಂತಿದೆ ತೋರಿಸಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಗದಗ ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಭಾನುವಾರ ೧೯೬.೬೦ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮುಖ್ಯಂತ್ರಿಗಳು ಮಾತನಾಡಿದರು.
ಸಮಸಮಾಜದ ವಿರೋಧಿಗಳು….
ಬಡವರು, ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡುವ ಗ್ಯಾರಂಟಿ ಯೋಜನೆ ಟೀಕಿಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರುಗಳಿಗೆ ಬಡವರು, ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗುವದು ಬೇಕಾಗಿಲ್ಲ. ಬಡವರು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರಿಗೆ ಎಲ್ಲಿ ಸಾಮಾಜಿಕ ಆರ್ಥಿಕ ಬಲ ಆಗಿ ಬಿಡುತ್ತೊ? ಸಮ ಸಮಾಜ ನಿರ್ಮಾಣವಾಗಿ ಬಿಡುವದೊ ಎಂಬ ಭಯ ಬಿಜೆಪಿ, ಜೆಡಿಎಸ್ ನಾಯಕರಿಗೆ ಕಾಡುತ್ತಿದೆ. ಈ ಜನರಿಗೆ ಆರ್ಥಿಕ, ಸಾಮಾಜಿಕ ಬಲ ಬಂದಲ್ಲಿ ತಮ್ಮ ಬೇಳೆ ಬೇಯುವದಿಲ್ಲವೆಂಬ ಭಯ. ಅವರಿಗೆ ಬಸವಣ್ಣನವರು, ಬುದ್ಧ-ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಸಮಾಜ ನಿರ್ಮಾಣ ಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳು ಛೇಡಿಸಿದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದ್ದಲ್ಲಿ ರೋಣ ಕ್ಷೇತ್ರದಲ್ಲಿ ಸುಮಾರು ಎರಡು ನೂರು ಕೋಟಿ ರೂಪಾಯಿಗಳ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.