BBK13: ಬಿಗ್ ಬಾಸ್ ಕನ್ನಡ ಸೀಸನ್ 13ರಿಂದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ದಿಢೀರ್ ಹೊರಬಂದಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಇದೀಗ ತಾವು ಶೋನಿಂದ ಹೊರಬರಲು ಎದುರಾದ ತೀವ್ರ ಆರೋಗ್ಯ ಸಮಸ್ಯೆಯೇ ಮುಖ್ಯ ಕಾರಣ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಹಾಗೇ ನಿಜವಾದ ಸತ್ಯವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ದೊಡ್ಮನೆಯಲ್ಲಿ ಅನುಕೂಲವಾಗದ ಆಹಾರ ಪದ್ಧತಿಯಿಂದಾಗಿ ಅವರಿಗೆ ರಕ್ತದೊತ್ತಡ (BP) ಹಾಗೂ ಸಕ್ಕರೆ ಕಾಯಿಲೆ (Sugar) ತೀವ್ರವಾಗಿ ಹೆಚ್ಚಾಗಿತ್ತು. ಜೊತೆಗೆ ಕಾಲಿನ ಸಮಸ್ಯೆಯೂ ಉಲ್ಬಣಗೊಂಡಿತ್ತು. “ಇನ್ನೂ ಕೆಲ ದಿನ ಅಲ್ಲೇ ಇದ್ದಿದ್ದರೆ ಸ್ಟ್ರೋಕ್ ಆಗುವ ಅಪಾಯವಿತ್ತು ಎಂದು ವೈದ್ಯರು ಎಚ್ಚರಿಸಿದ್ದರು. ಜೀವಕ್ಕೆ ತೊಂದರೆಯಾದರೆ ಕುಟುಂಬಕ್ಕೆ ಯಾರು ಉತ್ತರಿಸುತ್ತಾರೆ ಎಂಬ ಮಾನಸಿಕ ಆತಂಕ ಕಾಡಿದ್ದರಿಂದ ಹೊರಬರಬೇಕಾಯಿತು,” ಎಂದು ನಿರ್ದೇಶಕ ತಿಳಿಸಿದ್ದಾರೆ.
ಹಾಗೇ ಆಟದ ಕುರಿತು ಮಾತನಾಡಿದ ಅವರು, “ನಾನು ಟ್ರೋಫಿ ಗೆಲ್ಲಲು ಹೋಗಿರಲಿಲ್ಲ; ಜನರ ಮನರಂಜನೆಯಷ್ಟೇ ನನ್ನ ಉದ್ದೇಶವಾಗಿತ್ತು. ಜಗಳವಾಡಿ ಗೆಲ್ಲುವ ಮನಸ್ಥಿತಿ ನನ್ನದಲ್ಲ,” ಎಂದಿದ್ದಾರೆ. ವಾಹಿನಿಯವರು 15 ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದು, ಆರೋಗ್ಯ ಚೇತರಿಸಿಕೊಂಡರೆ ಮತ್ತೆ ‘ರೀ-ಎಂಟ್ರಿ’ ನೀಡುವ ಸುಳಿವು ಕೊಟ್ಟಿದ್ದಾರೆ.






















