SK Home Ad
Home ಸುದ್ದಿ ರಾಜ್ಯ ನೈಸ್‌ ವಿವಾದ, ಬರ ಪರಿಸ್ಥಿತಿ; ಸರ್ಕಾರದ ಮುಂದಿನ ನಡೆ ಬಿಚ್ಚಿಟ್ಟ ಸಿಎಂ

ನೈಸ್‌ ವಿವಾದ, ಬರ ಪರಿಸ್ಥಿತಿ; ಸರ್ಕಾರದ ಮುಂದಿನ ನಡೆ ಬಿಚ್ಚಿಟ್ಟ ಸಿಎಂ

0
12

ಬೆಂಗಳೂರು: “ನೈಸ್ ಯೋಜನೆ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕೈಗೊಳ್ಳಲಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಯೋಜನೆ ವಿಚಾರವಾಗಿ “ನಾವು ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಎಲ್ಲವನ್ನೂ ಮರುಪರಿಶೀಲನೆ ಮಾಡುತ್ತಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡುವುದಿಲ್ಲ. ಕಾನೂನು ಉಲ್ಲಂಘನೆಯಾಗಿದ್ದರೆ ಕೋರ್ಟ್ ಇದೆ, ಹೋರಾಟ ಮಾಡಲಿ” ಎಂದು ತೀಕ್ಷ್ಣವಾಗಿ ಹೇಳಿದರು.

ರೈತರ ರಕ್ಷಣೆ ಸರ್ಕಾರದ ಜವಾಬ್ದಾರಿ: “ರೈತರು ಆಸ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಸರ್ಕಾರಗಳು ಒಪ್ಪಂದಗಳಿಗೆ ಸಹಿ ಮಾಡಿಕೊಟ್ಟಿವೆ. ರೈತರು ಆಸ್ತಿ ಕಳೆದುಕೊಂಡಿದ್ದಾರೆ, ಅವರನ್ನು ರಕ್ಷಣೆ ಮಾಡಬೇಕು. ನನಗೂ ಪ್ರಜ್ಞೆ ಇದೆ. ಮನುಷ್ಯ ವಿದ್ಯಾವಂತನಾಗಿರದಿದ್ದರೂ ಬುದ್ಧಿವಂತನಾಗಿರಬೇಕು, ಸಾಮಾನ್ಯ ಪ್ರಜ್ಞೆ ಇರಬೇಕು” ಎಂದು ತಿರುಗೇಟು ನೀಡಿದರು.

ಇನ್ನಷ್ಟು ತಾಲ್ಲೂಕುಗಳಲ್ಲಿ ಬರ ಘೋಷಣೆ: “ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರ ಘೋಷಣೆ ವಿಚಾರದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವರದಿಗಳನ್ನು ಆಧರಿಸಿ 2–3 ಹಂತಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಇನ್ನೂ ಹಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು” ಎಂದು ಹೇಳಿದರು.

“ಹಲವು ತಾಲ್ಲೂಕಿನಿಂದ ಬರದ ವರದಿಗಳು ಬರುತ್ತಿವೆ. ಇನ್ನೂ ಬಹಳ ತಾಲೂಕುಗಳು ಘೋಷಣೆಯಾಗುತ್ತವೆ. ಬಹಳ ಕಡೆ ಭೀಕರ ಬರ ಇದೆ. 21 ದಿನ ಮಳೆಯಾಗದ ಸ್ಥಳಗಳನ್ನು ಗುರುತಿಸಿ ತಾಂತ್ರಿಕ ವರದಿ ಆಧರಿಸಿ ತೀರ್ಮಾನ ಮಾಡಲಾಗುವುದು” ಎಂದರು.

ಶಾಸಕರು ಆತಂಕ ಪಡಬೇಡಿ: “ಶಾಸಕರು ಯಾರೂ ಆತಂಕ ಪಡಬೇಡಿ. ಎಲ್ಲೆಲ್ಲಿ ಬರ ಇದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಉಪಮುಖ್ಯಮಂತ್ರಿ ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ದೇವೆ. ಒಂದೇ ಸಲ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಹಂತಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದರು.

ರೈತರ ಸಮಸ್ಯೆಗೆ ವಿಶೇಷ ಅಧಿವೇಶನ: “ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆದಿರುವುದಾಗಿ. ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದರು.