ಸಕ್ಕರೆ ಬೆಲೆ ಏರಿಕೆಗೆ ಕಾರಣವೇನು? ಗ್ರಾಹಕರಿಗೆ ಹೊರೆ ತಪ್ಪಿಸಲು ಕೇಂದ್ರದ ಮಹತ್ವದ ನಿರ್ಧಾರ – ಹಬ್ಬದ ವೇಳೆಗೆ ಸಾಕಷ್ಟು ಪೂರೈಕೆಗೆ ಕ್ರಮ
ನವದೆಹಲಿ: ದೇಶದಲ್ಲಿ ಸಕ್ಕರೆ ಬೆಲೆ ಇತ್ತೀಚಿನ ವಾರಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಏರಿಕೆಯಾಗುತ್ತಿದ್ದು. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ ಹಾಗೂ ಬೆಲೆ ಸ್ಥಿರತೆ ಖಚಿತಪಡಿಸಲು ಸರ್ಕಾರ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಸಕ್ಕರೆ ಬೆಲೆ ಏರಿಕೆಗೆ ಕಾರಣವೇನು? : ಸಕ್ಕರೆ ಬೆಲೆ ಏರಿಕೆಗೆ ಒಂದೇ ಕಾರಣವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಿರೀಕ್ಷೆಗಿಂತ ಕಡಿಮೆ ದೇಶೀಯ ಸಕ್ಕರೆ ಉತ್ಪಾದನೆ, ಹಬ್ಬದ ಅವಧಿಗೆ ಮುನ್ನ ಹೆಚ್ಚುತ್ತಿರುವ ಬೇಡಿಕೆ, ಕಬ್ಬು ಬೆಳೆಗೆ ಹವಾಮಾನದಿಂದ ಉಂಟಾದ ಹಾನಿ, ಜಾಗತಿಕವಾಗಿ ಸಕ್ಕರೆ ಪೂರೈಕೆ ಬಿಗಿಯಾಗಿರುವುದು ಹಾಗೂ ಕೆಲವು ವಲಯಗಳಲ್ಲಿ ದಾಸ್ತಾನು ಮತ್ತು ಊಹಾಪೋಹದ ವಹಿವಾಟು ಬೆಲೆ ಏರಿಕೆಗೆ ಕಾರಣಗಳಾಗಿವೆ ಎಂದು ಸರ್ಕಾರ ತಿಳಿಸಿದೆ.
ಪ್ರಸ್ತುತ ಸಕ್ಕರೆ ಹಂಗಾಮಿನಲ್ಲಿ ಉತ್ಪಾದನೆ ಸುಮಾರು 306 ಲಕ್ಷ ಟನ್ಗಳಿಗೆ ಇಳಿಯುವ ನಿರೀಕ್ಷೆಯಿದೆ. ಕಬ್ಬು ಬೆಳೆಯುವ ರಾಜ್ಯಗಳು ಆರಂಭದಲ್ಲಿ ಅಂದಾಜಿಸಿದ್ದ ಸುಮಾರು 343 ಲಕ್ಷ ಟನ್ಗಳಿಗಿಂತ ಇದು ಕಡಿಮೆಯಾಗಿದೆ. ಕಬ್ಬಿನಲ್ಲಿ ರೆಡ್ ರಾಟ್, ಟಾಪ್ ಬೋರರ್ ರೋಗ ಹಾಗೂ ಅಧಿಕ ಮಳೆಯಿಂದ ಉಂಟಾದ ಜಲಾವೃತ ಪರಿಸ್ಥಿತಿಯೂ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಎಥನಾಲ್ ಉತ್ಪಾದನೆಯಿಂದ ಬೆಲೆ ಏರಿಕೆಯೇ? : ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಬೇರೆಡೆಗೆ ತಿರುಗಿಸಿರುವುದೇ ಪ್ರಮುಖ ಕಾರಣ ಎಂಬ ವಾದವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಸರ್ಕಾರದ ಪ್ರಕಾರ, ಎಥನಾಲ್ಗಾಗಿ ತಿರುಗಿಸಲಾದ ಸಕ್ಕರೆಯ ಪ್ರಮಾಣ 2022-23ರಲ್ಲಿ ಸುಮಾರು ಶೇ.12ರಷ್ಟಿದ್ದರೆ, 2025-26ರಲ್ಲಿ ಅದು ಸುಮಾರು ಶೇ.9ಕ್ಕೆ ಇಳಿಕೆಯಾಗಿದೆ.
ದೇಶದಲ್ಲಿ ಉತ್ಪಾದನೆಯಾಗುವ ಎಥನಾಲ್ನ ಸುಮಾರು ಮುಕ್ಕಾಲು ಭಾಗ ಈಗ ಧಾನ್ಯಗಳಿಂದ, ಅದರಲ್ಲೂ ಮುಖ್ಯವಾಗಿ ಮೆಕ್ಕೆಜೋಳದಿಂದ ಬರುತ್ತಿದೆ ಎಂದು ಸರ್ಕಾರ ಹೇಳಿದೆ.
ದಾಸ್ತಾನು ಮಿತಿಗೆ ಬ್ರೇಕ್ : ಸಕ್ಕರೆ ದಾಸ್ತಾನು ಮಾಡಿ ಕೃತಕ ಕೊರತೆ ಸೃಷ್ಟಿಸುವುದನ್ನು ತಡೆಯಲು ಸರ್ಕಾರ ಈಗಾಗಲೇ ಸಕ್ಕರೆ ವ್ಯಾಪಾರಿಗಳಿಗೆ ದಾಸ್ತಾನು ಮಿತಿ ವಿಧಿಸಿದೆ. ಆಗಸ್ಟ್ 1ರಿಂದ ನವೆಂಬರ್ 30, 2026ರವರೆಗೆ ದೇಶಾದ್ಯಂತ ಸಕ್ಕರೆ ಡೀಲರ್ಗಳು ಗರಿಷ್ಠ 400 ಟನ್ಗಳಷ್ಟು ದಾಸ್ತಾನು ಹೊಂದಲು ಅವಕಾಶ ನೀಡಲಾಗಿದೆ.
ಇದಲ್ಲದೆ, ತಿಂಗಳಿಗೆ 10 ಟನ್ಗಿಂತ ಹೆಚ್ಚು ಸಕ್ಕರೆ ಬಳಸುವ ಬೃಹತ್ ಗ್ರಾಹಕರು ಸೆಪ್ಟೆಂಬರ್ 1ರಿಂದ ನವೆಂಬರ್ 30ರವರೆಗೆ ಗರಿಷ್ಠ 15 ದಿನಗಳ ಬಳಕೆಗೆ ಬೇಕಾಗುವಷ್ಟು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಅವಕಾಶವಿದೆ. ಇದರಿಂದ ಅತಿಯಾದ ದಾಸ್ತಾನು ಹಾಗೂ ಕೃತಕ ಕೊರತೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ.
10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದು : ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 10 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಈ ಆಮದು ಟ್ಯಾರಿಫ್ ರೇಟ್ ಕೋಟಾ (TRQ) ಅಡಿಯಲ್ಲಿ ಅಕ್ಟೋಬರ್ 31, 2026ರವರೆಗೆ ನಡೆಯಲಿದೆ.
ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸಿ ಬಿಳಿ ಸಕ್ಕರೆಯಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುವ ಮಿಲ್ಲರ್ಗಳು ಮತ್ತು ರಿಫೈನರ್ಗಳಿಗೆ ಕೋಟಾ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಅಕ್ಟೋಬರ್ 15ರೊಳಗೆ ಆಮದು ಪೂರ್ಣಗೊಳಿಸುವುದಾಗಿ ಒಪ್ಪಿಕೊಳ್ಳುವವರಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರದ ನಿಯಮಗಳಲ್ಲಿ ತಿಳಿಸಲಾಗಿದೆ.
ಸಕ್ಕರೆ ಮಿಲ್ಗಳ ದಾಸ್ತಾನು ಪರಿಶೀಲನೆ : ದಾಸ್ತಾನು ಮರೆಮಾಚುವಿಕೆ ಹಾಗೂ ಕೃತಕ ಕೊರತೆ ಸೃಷ್ಟಿಸುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳ ಜಂಟಿ ತಂಡಗಳು ಸಕ್ಕರೆ ಮಿಲ್ಗಳಲ್ಲಿ ಭೌತಿಕ ಪರಿಶೀಲನೆ ನಡೆಸುತ್ತಿವೆ. ಮಾರುಕಟ್ಟೆಯಲ್ಲಿನ ಸಕ್ಕರೆ ದಾಸ್ತಾನು, ಬೆಲೆ ಹಾಗೂ ವಹಿವಾಟಿನ ಮೇಲೆ ಸರ್ಕಾರ ನಿರಂತರ ನಿಗಾ ಇರಿಸಿದೆ.
ಅಕ್ಟೋಬರ್ನಿಂದ ಉತ್ಪಾದನೆ ಹೆಚ್ಚಿಸುವ ಯೋಜನೆ : ಹಬ್ಬದ ಅವಧಿಯಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಹಾಗೂ ಸಕ್ಕರೆ ಮಿಲ್ಗಳು ಅಕ್ಟೋಬರ್ 15ರಿಂದಲೇ ಕಬ್ಬು ಅರೆಯುವ ಹಂಗಾಮು ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ನಲ್ಲಿ ಸುಮಾರು 3ರಿಂದ 4 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಆದರೆ ಹಂಗಾಮನ್ನು ಮುಂಚಿತವಾಗಿ ಆರಂಭಿಸುವುದರಿಂದ ಅಕ್ಟೋಬರ್ ತಿಂಗಳ ಉತ್ಪಾದನೆಯನ್ನು 10 ಲಕ್ಷ ಟನ್ಗಿಂತಲೂ ಹೆಚ್ಚು ಮಾಡುವ ನಿರೀಕ್ಷೆ ಹೊಂದಲಾಗಿದೆ. ಇದರಿಂದ ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಅವಧಿಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಸಕ್ಕರೆ ಪೂರೈಕೆಯಾಗುವ ಸಾಧ್ಯತೆಯಿದೆ.
ಗ್ರಾಹಕರಿಗೆ ಸಮರ್ಪಕ ಪೂರೈಕೆ ಖಚಿತಪಡಿಸುವ ಭರವಸೆ : ಪ್ರಸ್ತುತ ಉತ್ಪಾದನೆ ಅಂದಾಜಿಗಿಂತ ಕಡಿಮೆಯಾಗಿದ್ದರೂ, ಹೊಸ ಕಬ್ಬು ಅರೆಯುವ ಹಂಗಾಮು ಆರಂಭವಾಗುವ ಅಕ್ಟೋಬರ್ವರೆಗೆ ದೇಶೀಯ ಬೇಡಿಕೆ ಪೂರೈಸಲು ಅಗತ್ಯ ಪ್ರಮಾಣದ ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರದ ಕ್ರಮಗಳು ಸೂಚಿಸುತ್ತವೆ.
ಸಕ್ಕರೆ ಬೆಲೆ, ದಾಸ್ತಾನು ಹಾಗೂ ಮಾರುಕಟ್ಟೆ ವಹಿವಾಟಿನ ಮೇಲೆ ಸರ್ಕಾರದ ನಿಗಾ ಮುಂದುವರಿಯಲಿದ್ದು, ದಾಸ್ತಾನು ಮಾಡಿ ಕೃತಕ ಬೆಲೆ ಏರಿಕೆ ಮಾಡುವ ಪ್ರಯತ್ನಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
- ನಿಮ್ಮ ಕಷ್ಟಗಳಲ್ಲಿ ಜತೆಯಾಗಿ ನಿಲ್ಲುತ್ತೇನೆ: ಸಚಿವ ಬಸವಂತಪ್ಪ ಭರವಸೆ
- ಗಾಯಗೊಂಡಿದ್ದ ʻಜೋಯ್ ಮೋತಿʼ ಆನೆ ವನತಾರಾ ಆಸ್ಪತ್ರೆಗೆ ಏರ್ಲಿಫ್ಟ್
- ಸಕ್ಕರೆ ಬೆಲೆ ಏರಿಕೆ ತಡೆಗೆ ಕೇಂದ್ರದ ಆ್ಯಕ್ಷನ್: ದಾಸ್ತಾನು ಮಿತಿಗೂ ಬ್ರೇಕ್
- ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ: ಕರ್ನಾಟಕದ ಶಿಕ್ಷಕಿ ರತ್ನಕುಮಾರಿ ಆಯ್ಕೆ
- ಬಿಸಿಯೂಟದಲ್ಲಿ ಹಲ್ಲಿ ಪತ್ತೆ: 120ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ!





















