ಕಡೂರು: ತಾಯಿ ಚನ್ನಮ್ಮ ದೇವೇಗೌಡರನ್ನು ನೆನೆದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ವೇದಿಕೆಯಲ್ಲೇ ಗಳಗಳನೆ ಕಣ್ಣೀರಿಟ್ಟ ಘಟನೆ ಶನಿವಾರ ಕಡೂರಿನಲ್ಲಿ ನಡೆಯಿತು.
ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ನಾಗರಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರೇವಣ್ಣ, ಚನ್ನಮ್ಮ ಅವರ ಸರಳತೆ, ಸೌಜನ್ಯ ಹಾಗೂ ಮಾನವೀಯ ಗುಣಗಳನ್ನು ಸ್ಮರಿಸಿದರು.
ನಮ್ಮ ತಾಯಿ ಚನ್ನಮ್ಮ ಯಾರನ್ನೂ ನೋಯಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳುವ ವೇಳೆ ರೇವಣ್ಣ ಭಾವುಕರಾದರು. ಮಾತು ಮುಂದುವರಿಸಲಾಗದೆ ಕೆಲಕಾಲ ಕಣ್ಣೀರಿಟ್ಟರು.
ಕಡೂರು ಜನತೆ ತಮ್ಮ ತಂದೆ ಎಚ್.ಡಿ. ದೇವೇಗೌಡರು ಹಾಗೂ ಕುಟುಂಬಕ್ಕೆ ನೀಡಿದ ಬೆಂಬಲವನ್ನು ಸ್ಮರಿಸಿದ ಅವರು, ಕಡೂರು ಜನರು ನಮ್ಮ ತಂದೆ ದೇವೇಗೌಡರನ್ನು, ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿದ್ದಾರೆ. ನಮ್ಮ ಕುಟುಂಬ ಕಡೂರು ಜನರನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ದೇವೇಗೌಡರ ಪುತ್ರಿ ಅನುಸೂಯ, ಸಂಸದ ಡಾ. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಚನ್ನಮ್ಮ ದೇವೇಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.






















