SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕಡಿದ ದುರಳರು

ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕಡಿದ ದುರಳರು

0
244

ಉತ್ತರ ಕನ್ನಡ(ಹೊನ್ನಾವರ): ಆಕಳು ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಮಾಸುವ ಮೊದಲೇ ತಾಲೂಕಿನ ಸಾಲ್ಕೋಡಿನಲ್ಲಿ ಮೇಯಲು ಬಿಟ್ಟ ಗರ್ಭ ಧರಿಸಿದ್ದ ಹಸುವೊಂದನ್ನು ಕೊಂದು ಅದರ ರುಂಡ, ಕಾಲುಗಳನ್ನು ಹಾಗೂ ಗರ್ಭದಲ್ಲಿದ್ದ ಕರುವನ್ನು ಸ್ಥಳದಲ್ಲಿ ಎಸೆದು ಮಾಂಸವನ್ನು ಮಾತ್ರ ಎತ್ತೊಯ್ದ ಅಮಾನವೀಯ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಆಕಳು ಸಾಲ್ಕೊಡಿನ ಕೊಂಡಾಕುಳಿಯ ಕೃಷ್ಣ ಆಚಾರಿ ಎನ್ನುವವರಿಗೆ ಸೇರಿದ್ದಾಗಿದೆ. ಪ್ರತಿದಿನ ಮೇಯಲು ಹೋಗುವ ಆಕಳು ಸಂಜೆ ಐದು ಗಂಟೆಗೆ ಕೊಟ್ಟಿಗೆಗೆ ಮರಳುತ್ತಿತ್ತು. ಆಕಳು ಸಂಜೆಯಾದರೂ ಬರಲಿಲ್ಲ. ನಂತರ ಎಲ್ಲೆಡೆ ಹುಡುಕಾಡಿದೆವು. ಮರುದಿನ ಮುಂಜಾನೆ ಹುಡುಕಲು ಹೋದಾಗ ಬೆಟ್ಟದಲ್ಲಿ ಆಕಳ ರುಂಡ ಬಿದ್ದಿರುವುದು ಕಂಡಿತು. ಆ ಕಡೆ ಈ ಕಡೆ ನೋಡಿದಾಗ ಅದರ ಕಾಲುಗಳನ್ನ ಕತ್ತರಿಸಿ ಬಿಸಾಡಿರುವುದು ಕಂಡುಬಂತು ಹಸುವಿನ ದೇಹದ ಭಾಗ-ಮಾಂಸವನ್ನು ಮಾತ್ರ ಒಯ್ದಿದ್ದಾರೆ. ಆಕಳು ಗರ್ಭಧರಿಸಿ ಐದಾರು ತಿಂಗಳು ಆಗಿರಬಹುದು. ಅದರ ಹೊಟ್ಟೆಯೊಳಗಿರುವ ಕರುವಿನ ಭ್ರೂಣವನ್ನು ಹೊರತೆಗೆದು ಅದನ್ನು ಸೀಳಿ ಹತ್ಯೆ ಮಾಡಿ ಬಿಸಾಡಿದ್ದಾರೆ ಎಂದು ಕೃಷ್ಣ ಆಚಾರಿ ದುಃಖಿತರಾಗಿ ತಿಳಿಸಿದ್ದಾರೆ.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಆಚಾರಿ ದೂರು ದಾಖಲಿಸಿದ್ದಾರೆ. ಪಿ.ಎಸ್.ಐ. ಮಂಜುನಾಥ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ದಿನಕರ ಶೆಟ್ಟಿ ಆಕ್ರೋಶ:
ಶಾಸಕ ದಿನಕರ ಶೆಟ್ಟಿ ಅವರು ಹಸುವನ್ನು ಕೊಂದ ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕ ಕೃಷ್ಣ ಆಚಾರಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭಯದ ವಾತಾವರಣ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹಿಂದೂಗಳು. ಹಸು ನಮ್ಮ ನಂಬಿಕೆ. ಆ ಕುರಿತು ನಮ್ಮ ಪವಿತ್ರ ಭಾವನೆಯನ್ನು ಘಾಸಿಗೊಳಿಸುವುದನ್ನು ನಾವು ಸಹಿಸುವುದಿಲ್ಲ ಎಂದ ಅವರು, ಬಿಜೆಪಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಇಲ್ಲಿ ಕರೆಯಿಸುವ ಪ್ರಯತ್ನ ಮಾಡುತ್ತೇವೆ. ಪೊಲೀಸರು ನಿರ್ಲಕ್ಷ್ಯ ವಹಿಸಿದರೆ ಸುಮ್ಮನೆ ಇರುವುದಿಲ್ಲ. ಸಮರ್ಪಕ ತನಿಖೆ ಆಗಲಿ ಎಂದು ಆಗ್ರಹಿಸಿದರು.