ತಮಿಳುನಾಡಿನ ರಾಣಿಪೇಟೆಯಲ್ಲಿ 9,000 ಕೋಟಿ ರೂ. ಮೌಲ್ಯದ ಟಾಟಾ-ಜೆಎಲ್ಆರ್ ಸ್ಥಾವರವನ್ನು ಸ್ಟಾಲಿನ್ ಉದ್ಘಾಟನೆ
ರಾಣಿಪೇಟೆ (ತಮಿಳುನಾಡು): ತಮಿಳುನಾಡಿನ ರಾಣಿಪೇಟೆ ಜಿಲ್ಲೆಯಲ್ಲಿ ಟಾಟಾ ಮೋಟಾರ್ಸ್ನ ನೂತನ ಕಾರು ಉತ್ಪಾದನಾ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜಾಗ್ವಾರ್ ಲ್ಯಾಂಡ್ ರೋವರ್ (JLR) ಕಾರುಗಳ ಉತ್ಪಾದನೆಗೆ ಹಸಿರು ನಿಶಾನೆ ತೋರಿದರು.
ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಟಾಟಾ ಗ್ರೂಪ್ನ ಹಿರಿಯ ಅಧಿಕಾರಿಗಳು, ಸರ್ಕಾರಿ ಪ್ರತಿನಿಧಿಗಳು ಹಾಗೂ ಕೈಗಾರಿಕಾ ಕ್ಷೇತ್ರದ ಪ್ರಮುಖರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳ ಸಿದ್ಧತೆ
16 ತಿಂಗಳಲ್ಲಿ ನಿರ್ಮಾಣಗೊಂಡ ಘಟಕ: ಸುಮಾರು ₹9,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಅತ್ಯಾಧುನಿಕ ಉತ್ಪಾದನಾ ಘಟಕವು ಸೆಪ್ಟೆಂಬರ್ 2024ರಲ್ಲಿ ಶಿಲಾನ್ಯಾಸಗೊಂಡಿದ್ದು, ಕೇವಲ 16 ತಿಂಗಳಲ್ಲಿ ನಿರ್ಮಾಣಗೊಂಡಿದೆ. ಈ ಘಟಕವು ಭಾರತ ಹಾಗೂ ರಫ್ತು ಮಾರುಕಟ್ಟೆಗಳಿಗೆ ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ಐಷಾರಾಮಿ ಕಾರುಗಳನ್ನು ಉತ್ಪಾದಿಸಲಿದೆ.
ಈ ಘಟಕದಲ್ಲಿ ವರ್ಷಕ್ಕೆ ಸುಮಾರು 3 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಆರಂಭಿಕ ಹಂತದಲ್ಲೇ 5,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದರಿಂದ ಸ್ಥಳೀಯ ಪೂರೈಕೆದಾರರು ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಯಿಗೂ ಉತ್ತೇಜನ ದೊರೆಯಲಿದೆ.
ಇದನ್ನೂ ಓದಿ: IPL ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಮತಿ: ಗೃಹ ಸಚಿವರ ಸಮಾಲೋಚನೆ
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಇದನ್ನು ಟಾಟಾ ಗ್ರೂಪ್ಗೆ “ಸುವರ್ಣ ದಿನ” ಎಂದು ವರ್ಣಿಸಿದರು. ರಾಜ್ಯ ಸರ್ಕಾರದ ವೇಗವಾದ ಅನುಮೋದನೆ ಮತ್ತು ಸಹಕಾರದಿಂದ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ತಮಿಳುನಾಡು ಇಂದು ಜಾಗತಿಕ ಹೂಡಿಕೆದಾರರ ಪ್ರಮುಖ ಗಮ್ಯಸ್ಥಾನವಾಗುತ್ತಿದೆ ಎಂದು ಹೇಳಿದರು. ಕಳೆದ ವರ್ಷ ವಿನ್ಫಾಸ್ಟ್ ಘಟಕದ ಸ್ಥಾಪನೆಯ ಬಳಿಕ, ಇದೀಗ ಟಾಟಾ-ಜೆಎಲ್ಆರ್ ಘಟಕ ಆರಂಭವಾಗಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಗುಂಡಿನ ದಾಳಿಗೆ ಬಲಿ
ಈ ಘಟಕದೊಂದಿಗೆ, ತಮಿಳುನಾಡಿನಲ್ಲಿ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಟಾಟಾ-ಜೆಎಲ್ಆರ್, ಹುಂಡೈ, ರೆನಾಲ್ಟ್, ನಿಸ್ಸಾನ್, ಬಿಎಂಡಬ್ಲ್ಯು ಮತ್ತು ವಿನ್ಫಾಸ್ಟ್ ಸಂಸ್ಥೆಗಳ ಜೊತೆಗೆ ಆರನೇ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ರಾಣಿಪೇಟೆಯ ಪಣಪಕ್ಕಂ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಈ ಘಟಕವು ಭವಿಷ್ಯದಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಮುಖ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.





















