ಭಾರತ ಮಂಟಪದಲ್ಲಿ ಜಾಗತಿಕ AI ಮಹಾಸಮ್ಮೇಳನ – ಯುವ ಪೀಳಿಗೆಯ ಆತ್ಮವಿಶ್ವಾಸಕ್ಕೆ ಮೋದಿ ಮೆಚ್ಚುಗೆ
ನವದೆಹಲಿ: ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026 ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭವ್ಯವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ 2026ರ ಭಾರತ AI ಶೃಂಗಸಭೆಯ ಉದ್ದೇಶ, ದಿಕ್ಕು ಮತ್ತು ಜಾಗತಿಕ ಮಹತ್ವವನ್ನು ವಿವರಿಸಿದ ಅವರು, “AI ಅನ್ನು ಪ್ರಜಾಪ್ರಭುತ್ವಗೊಳಿಸುವುದು ಕಾಲದ ಅವಶ್ಯಕತೆ” ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ಭಾರತವು ಕೇವಲ ಹೊಸ ತಂತ್ರಜ್ಞಾನವನ್ನು ಸೃಷ್ಟಿಸುವ ದೇಶವಲ್ಲ, ಅದನ್ನು ಅಭೂತಪೂರ್ವ ವೇಗದಲ್ಲಿ ಅಳವಡಿಸಿಕೊಳ್ಳುವ ಶಕ್ತಿಯೂ ಹೊಂದಿದೆ ಎಂದು ಹೇಳಿದರು. “AI ಮಾನವ ಇತಿಹಾಸದ ಒಂದು ಮಹತ್ವದ ರೂಪಾಂತರ. ಅದರ ದಿಕ್ಕನ್ನು ಭವಿಷ್ಯದಲ್ಲಿ ಅಲ್ಲ, ಇಂದೇ ನಿರ್ಧರಿಸಬೇಕು” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ
‘AI ಭವಿಷ್ಯದಲ್ಲಿ ಭಾರತಕ್ಕೆ ಭಯವಿಲ್ಲ’: ಭಾರತವು AIಯನ್ನು ಭಯದ ದೃಷ್ಟಿಯಿಂದ ಅಲ್ಲ, ಭವಿಷ್ಯದ ಅವಕಾಶವಾಗಿ ನೋಡುತ್ತದೆ ಎಂದು ಮೋದಿ ಹೇಳಿದರು. AI ಕ್ಷೇತ್ರದಲ್ಲಿ ಭಾರತ ಜಾಗತಿಕ ದಕ್ಷಿಣದ ಆಶಾಕಿರಣವಾಗಿದೆ. ಈ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸುವುದು ದೇಶಕ್ಕಷ್ಟೇ ಅಲ್ಲ, ಇಡೀ ಜಾಗತಿಕ ದಕ್ಷಿಣಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಯುವಶಕ್ತಿ – ಭಾರತದ ದೊಡ್ಡ ಬಲ: ಭಾರತ ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದ್ದು, ಅಪಾರ ಪ್ರತಿಭೆಗಳನ್ನು ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು. “ನೂರಕ್ಕೂ ಹೆಚ್ಚು ದೇಶಗಳಿಂದ ಬಂದ ಗಣ್ಯರು ಮತ್ತು ತಜ್ಞರು ಈ ವೇದಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಯುವ ಪೀಳಿಗೆಯ ಉಪಸ್ಥಿತಿ ಹೊಸ ಆತ್ಮವಿಶ್ವಾಸ ತುಂಬುತ್ತದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಾಂಡೇಲಿಯ ಬಡ ಕುಟುಂಬದ ಯುವತಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ
AI ಕ್ಷೇತ್ರದಲ್ಲಿ ಸಂಶೋಧನೆ, ನವೀನತೆ, ನೈತಿಕ ಬಳಕೆ ಹಾಗೂ ಜಾಗತಿಕ ಸಹಕಾರದ ಅಗತ್ಯವನ್ನು ಒತ್ತಿಹೇಳಿದ ಮೋದಿ, ಭಾರತ AI ಅಭಿವೃದ್ಧಿಯಲ್ಲಿ ಮಾನವ ಕೇಂದ್ರಿತ ದೃಷ್ಠಿಕೋನವನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಈ ಶೃಂಗಸಭೆಯಲ್ಲಿ ವಿವಿಧ ದೇಶಗಳ ತಂತ್ರಜ್ಞಾನ ತಜ್ಞರು, ನೀತಿನಿರ್ಧಾರಕರು, ಸ್ಟಾರ್ಟ್ಅಪ್ ಪ್ರತಿನಿಧಿಗಳು ಹಾಗೂ ಯುವ ಉದ್ಯಮಿಗಳು ಭಾಗವಹಿಸಿದ್ದು, AI ನ ಭವಿಷ್ಯದ ಕುರಿತು ಚರ್ಚೆಗಳು ನಡೆಯಲಿವೆ.




















