ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ
ನವದೆಹಲಿ : ಭಾರತೀಯ ಕಿರುತೆರೆಯ ಸುವರ್ಣ ಯುಗದ ಅವಿಭಾಜ್ಯ ಅಂಗವಾಗಿದ್ದ, ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ (71) ಅವರು ಗುರುವಾರ ನವದೆಹಲಿಯಲ್ಲಿ ನಿಧನರಾದರು. ಕಳೆದ ಕೆಲಕಾಲದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
1980 ಮತ್ತು 1990ರ ದಶಕಗಳಲ್ಲಿ ದೂರದರ್ಶನ ನ್ಯೂಸ್ನ ಪ್ರಮುಖ ಮುಖವಾಗಿದ್ದ ಸರಳಾ ಮಹೇಶ್ವರಿ ಅವರು, ತಮ್ಮ ವಿಶಿಷ್ಟ ವಾಚನ ಶೈಲಿ, ನಿಖರ ಉಚ್ಚಾರಣೆ ಮತ್ತು ಘನತೆಯ ನಿರೂಪಣೆಯ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಅವರ ನಿಧನದಿಂದ ಭಾರತೀಯ ಸುದ್ದಿ ಪ್ರಸಾರ ಕ್ಷೇತ್ರವು ಒಬ್ಬ ಅಪೂರ್ವ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
ಇದನ್ನೂ ಓದಿ: ಜಿಪಂ CEO ಕಾರ್ ಜಪ್ತಿಗೆ ಮುಂದಾದ ನ್ಯಾಯಾಲಯದ ಸಿಬ್ಬಂದಿ
ಅವರ ಅಂತ್ಯಕ್ರಿಯೆಯು ಗುರುವಾರ ಸಂಜೆ ನವದೆಹಲಿಯ ನಿಗಮ್ ಬೋಧ್ ಘಾಟ್ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುದ್ದಿಗಳ ಧ್ರುವತಾರೆಯಾಗಿದ್ದ ಸರಳಾ ಮಹೇಶ್ವರಿ: ಖಾಸಗಿ ಸುದ್ದಿ ವಾಹಿನಿಗಳ ಪ್ರವಾಹ ಆರಂಭವಾಗುವ ಮುನ್ನ, ದೇಶದ ಬಹುತೇಕ ಮನೆಗಳಲ್ಲಿ ಸುದ್ದಿಗಾಗಿ ದೂರದರ್ಶನವೇ ಪ್ರಮುಖ ಆಧಾರವಾಗಿತ್ತು. ಅಂತಹ ಸಮಯದಲ್ಲಿ ಸರಳಾ ಮಹೇಶ್ವರಿ ಅವರು ಸುದ್ದಿಯ ನಂಬಿಕಸ್ಥ ಪ್ರತಿನಿಧಿಯಾಗಿದ್ದರು. ಅವರ ಸರಳ ವ್ಯಕ್ತಿತ್ವ, ಸಂಯಮಿತ ಶೈಲಿ ಮತ್ತು ಸ್ಪಷ್ಟ ಉಚ್ಚಾರಣೆ ವೀಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸಿತ್ತು. ಸುದ್ದಿಯನ್ನು ಯಾವುದೇ ಅತಿರೇಕವಿಲ್ಲದೆ, ಶಾಂತ ಮತ್ತು ಘನತೆಯೊಂದಿಗೆ ವಾಚನ ಮಾಡುವ ಶೈಲಿಗೆ ಅವರು ಹೆಸರುವಾಸಿಯಾಗಿದ್ದರು.
ಸರಳಾ ಮಹೇಶ್ವರಿ ಅವರಿಗೆ ದೂರದರ್ಶನದ ಅಧಿಕೃತ ಶ್ರದ್ಧಾಂಜಲಿ: ಸರಳಾ ಮಹೇಶ್ವರಿ ಅವರ ನಿಧನಕ್ಕೆ ದೂರದರ್ಶನ ನ್ಯೂಸ್ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. “ಸರಳಾ ಮಹೇಶ್ವರಿ ಅವರ ಸರಳತೆ, ಸಂಯಮ ಮತ್ತು ಪ್ರಭಾವಶಾಲಿ ವ್ಯಕ್ತಿತ್ವವು ವೀಕ್ಷಕರ ಹೃದಯದಲ್ಲಿ ನಂಬಿಕೆಯನ್ನು ಮೂಡಿಸಿತ್ತು. ಅವರು ತಮ್ಮ ಮೃದು ಧ್ವನಿ ಮತ್ತು ಘನತೆಯ ಪ್ರಸ್ತುತಿಯಿಂದ ಭಾರತೀಯ ಸುದ್ದಿ ಲೋಕದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು” ಎಂದು ಡಿಡಿ ನ್ಯೂಸ್ ಪೋಸ್ಟ್ ಮಾಡಿದೆ.
ಇದನ್ನೂ ಓದಿ: JDS ಜಿಲ್ಲಾಧ್ಯಕ್ಷರ ಆಯ್ಕೆ ವಿವಾದ: ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ
ಭಾಷಾ ಶುದ್ಧತೆಯ ಪ್ರತೀಕ: ಇಂದಿನ ಗದ್ದಲದ ಸುದ್ದಿ ಪ್ರಸಾರಕ್ಕೆ ಭಿನ್ನವಾಗಿ, ಸರಳಾ ಮಹೇಶ್ವರಿ ಅವರು ಸುದ್ದಿಯ ಗಂಭೀರತೆಯನ್ನು ಕಾಪಾಡಿಕೊಂಡು ವಾಚನ ಮಾಡುತ್ತಿದ್ದರು. ಅವರ ಸಂಸ್ಕೃತಮಿಶ್ರಿತ ಶುದ್ಧ ಹಿಂದಿ ಉಚ್ಚಾರಣೆ ಅಂದಿನ ವಿದ್ಯಾರ್ಥಿಗಳು ಮತ್ತು ಭಾಷಾ ಪ್ರೇಮಿಗಳಿಗೆ ಮಾದರಿಯಾಗಿತ್ತು. ವಿದೇಶಿ ಸುದ್ದಿಗಳಿಂದ ಹಿಡಿದು ಗ್ರಾಮೀಣ ಭಾರತದ ಸಮಸ್ಯೆಗಳವರೆಗೂ, ಪ್ರತಿಯೊಂದು ಸುದ್ದಿಯನ್ನೂ ಅವರು ಸಮಾನ ಘನತೆಯಿಂದ ಪ್ರಸ್ತುತಪಡಿಸುತ್ತಿದ್ದರು.
ದೂರದರ್ಶನದ ಒಂದು ಅಧ್ಯಾಯದ ಅಂತ್ಯ: ಸರಳಾ ಮಹೇಶ್ವರಿ ಅವರ ನಿಧನದೊಂದಿಗೆ ದೂರದರ್ಶನದ ಸುವರ್ಣ ಯುಗದ ಒಂದು ಸುಂದರ ಅಧ್ಯಾಯ ಮುಕ್ತಾಯಗೊಂಡಂತಾಗಿದೆ. ಜೆ.ಬಿ. ರಮಣ್, ನೀತಿ ರವೀಂದ್ರನ್, ಸಲಮಾ ಸುಲ್ತಾನ್ ಮುಂತಾದ ಖ್ಯಾತ ವಾಚಕರ ಸಾಲಿನಲ್ಲಿ ಅವರ ಹೆಸರು ಸದಾಕಾಲ ಉಳಿಯಲಿದೆ.
ಇದನ್ನೂ ಓದಿ: ದಾಂಡೇಲಿ: ಸೈಟ್ ಚೋರಿ ಬಳಿಕ ಸರ್ಕಾರಿ ಮನೆಗಳ ಮೇಲೂ ಕಣ್ಣು
ಗಣ್ಯರ ಸಂತಾಪ: ಸರಳಾ ಅವರ ನಿಧನಕ್ಕೆ ಮಾಧ್ಯಮ ಲೋಕದ ಅನೇಕ ಹಿರಿಯರು, ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು, “ಅವರು ಕೇವಲ ಸುದ್ದಿ ವಾಚಕಿಯಲ್ಲ, ನಮ್ಮ ಕಾಲದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು” ಎಂದು ಸ್ಮರಿಸುತ್ತಿದ್ದಾರೆ.






















