ನವದೆಹಲಿ: ಸೋಮವಾರ ಸಂಜೆ ದೆಹಲಿ ಭಯೋತ್ಪಾದಕರ ದಾಳಿಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಇದರಿಂದಾಗಿ ಸ್ಫೋಟ ಪ್ರಕರಣ ಭಯೋತ್ಪಾದಕರ ದಾಳಿ ಎಂಬುದು ಪರೋಕ್ಷವಾಗಿ ಈಗ ಸಾಬೀತಾಗಿದೆ.
ಇದೀಗ ಪ್ರಕರಣವನ್ನೂ ಎನ್ಐಎಗೆ ವಹಿಸಿದ್ದು ಹಾಗೂ ಭಯೋತ್ಪಾದನಾ ನಿಗ್ರಹ ಕಾಯ್ಡೆ ಹಾಗೂ ಸ್ಫೋಟಕ ವಸ್ತುಗಳ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದರಿಂದ ತನಿಖೆಯ ಜಾಡು ಭಯೋತ್ಪಾದಕದ ದಾಳಿಯ ಷಡ್ಯಂತ್ರ ಭೇದಿಸುವತ್ತ ಸಾಗಿದೆ.
ಬಿಳಿ ಕಾಲರ್ ಭಯೋತ್ಪಾದನೆಯಡಿ ಮೂವರು ವೈದ್ಯರೂ ಸೇರಿದಂತೆ ಎಂಟು ಶಂಕಿತ ಉಗ್ರರನ್ನು ಬಂಧಿಸುವ ವೇಳೆ ಅವರ ಸಂಗಡಿಗ ಡಾ. ಉಮರ್ ಮುಹಮ್ಮದ್ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದು ಫರೀದಾಬಾದ್ನಿಂದ ತನ್ನ ಕಾರಿನಲ್ಲಿ ಸ್ಫೋಟಕವನ್ನು ತುಂಬಿಸಿಕೊಂಡು ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ಕೃತ್ಯವೆಸಗುವ ಮೂಲಕ ಆತ್ಮಾಹುತಿ ದಾಳಿ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಉಮರ್ ಮುಹಮ್ಮದ್ ತಂದೆ ಗುಲಾಂ ನಬಿ ಬಟ್ ಅವರನ್ನು ಪುಲ್ವಾಮಾದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಳಿ ಕಾಲರ್ ಭಯೋತ್ಪಾದಕರ ಜಾಲದಲ್ಲಿ ಫರೀದಾ ಬಾದ್ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನ ಹಲವು ವೈದ್ಯರುಗಳೇ ಶಾಮೀಲಾಗಿದ್ದು ಪ್ರಕರಣದ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ಈ ಮಧ್ಯೆ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು, ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಹಲವಾರು ದೇಶಗಳು ಕಾರು ಸ್ಫೋಟ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದು ಅಪರಾಧಿಗಳ ವಿರುದ್ಧ ಅತ್ಯುಗ್ರ ಕ್ರಮಕ್ಕೆ ಒತ್ತಾಯಿಸಿವೆ.























