ಹೊಸಪೇಟೆ:ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ತನ್ನ ತಂಗಿ ಗರ್ಭಿಣಿಯಾಗಿದ್ದಳು ಎಂಬ ಕಥೆ ಕಟ್ಟಿ ಪೊಲೀಸರನ್ನೇ ನಂಬಿಸಲು ಯತ್ನಿಸಿದ್ದ ಹಂತಕ ಅಕ್ಷಯ್ನ ಅಸಲಿ ಮುಖವಾಡ ಕಳಚಿದೆ.
ಕೊಲೆ ಕೃತ್ಯದ ಹಿಂದೆ ಮರ್ಯಾದೆ ಹತ್ಯೆಯ ಕಥೆ ಕಟ್ಟಿದ್ದ ಹಂತಕನನ್ನು ಪೊಲೀಸರು ಬಾಯಿ ಬಿಡಿಸಿದ್ದಾರೆ. 1.20 ಕೋಟಿ ರೂಪಾಯಿ ಹಣದಾಸೆಗಾಗಿ ಹೆತ್ತ ತಂದೆ-ತಾಯಿ, ಸೋದರಿಯನ್ನೇ ಮುಗಿಸಿದ್ದಾನೆ ಎನ್ನುವ ಆಘಾತಕಾರಿ ಸತ್ಯ ಬಯಲಾಗಿದೆ.
ಆರೋಪಿ ಅಕ್ಷಯ್ನ ಕ್ರಿಕೆಟ್ ಬೆಟ್ಟಿಂಗ್ ಚಟ ಮತ್ತು ಗಾಂಜಾ ಸೇವನೆ. ಮಗನ ಕ್ರಿಕೆಟ್ ಬೆಟ್ಟಿಂಗ್ಗಾಗಿ ಸುಮಾರು ಐವತ್ತು ಲಕ್ಷ ರೂ. ಸಾಲ ಮಾಡಿದ್ದನಂತೆ. ಈ ಸಾಲಕ್ಕೆ ತಂದೆ ತನ್ನ ಸ್ವಂತ ಜಮೀನನ್ನು ಅಡಮಾನ ಇಟ್ಟಿರುವ ಮಾಹಿತಿ ಹೊರಬಿದ್ದಿದೆ. ಇಂತಹ ಘಟನೆಗಳು ಸಾಕಷ್ಟು ನಡೆದಿವೆ.
ಈ ಹಿಂದೆ ಸಂಡೂರು ತಾಲೂಕಿನ ಸ್ವಾಮಿಹಳ್ಳಿಯಲ್ಲಿ ಅಂಗಡಿ ತೆರೆದು, ಅಲ್ಲಿಯೂ ಸಹ ಇದೇ ಬುದ್ಧಿಯನ್ನು ಮುಂದುವರೆಸಿ, ಬೆಟ್ಟಿಂಗ್ ಧಂಧೆಗೆ ಇಳಿದಿದ್ದಾನೆ. ನಂತರ ಜಗಳೂರಿಗೆ ಹೋಗಿ ಅಲ್ಲಿಯೂ ಸಹ ಹೋಗಿ ಸಾಲ ಮಾಡಿ ಹಣ ಬೇಕಾಬಿಟ್ಟಿಯಾಗಿ ಸಾಲ ಮಾಡಿದ್ದಾನೆ. ಇವನು ಮಾಡುವ ಈ ಕೆಲಸಗಳಿಗೆ ತಂದೆ ತಾಯಿಗಳು ಜವಾಬ್ದಾರರಾಗಿ ಮಗನ ಮೇಲಿನ ಪ್ರೇಮಕ್ಕೆ ಕಟ್ಟುಬಿದ್ದು, ಇವನು ಮಾಡಿರುವ ಎಲ್ಲಾ ಸಾಲಗಳನ್ನು ತೀರಿಸುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ಜಗಳೂರಿನಲ್ಲಿ ತಂದೆ ಕಟ್ಟಿಸಿದ್ದ ಮನೆಯನ್ನು ಅಂದಾಜು ಒಂದೂವರೆ ಕೋಟಿಗೆ ಮಾರಿದ್ದು, ಈ ಹಣದಲ್ಲಿ ಇಂತಿಷ್ಟು ಹಣವನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಕೌಂಟ್ನಲ್ಲಿ 15 ಲಕ್ಷ ರೂ. ಹಣ ಬಿಡಿಸಿಕೊಂಡಿದ್ದಾನೆ.
ಇನ್ನುಳಿದ ಹಣವನ್ನು ಕೊಡುವಂತೆ ಪೀಡಿಸಿದ್ದಾನೆ. ತಂದೆ ಇದಕ್ಕೆ ಒಪ್ಪದೇ ಇದ್ದಾಗ ಈ ಕೃತ್ಯ ಎಸಗಿದ್ದಾನೆ ಎಂಬುದು ಬಲ್ಲ ಮಾಹಿತಿ. ತನ್ನ ತಂದೆ ತನಗೆ ಹಣ ಕೊಡಲಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಂಡು ತನ್ನ ಮನಸ್ಸನ್ನು ಮೃಗರಾಕ್ಷಸದಂತೆ ಬದಲಾಯಿಸಿಕೊಂಡು ತನ್ನ ತಂದೆ, ತಾಯಿ, ತಂಗಿಯನ್ನು ಅಮಾನುಷವಾಗಿ ಕೊಂದಿದ್ದಾನೆ.
ಆರೋಪಿಯಾದ ಅಕ್ಷಯ್ ಈ ಮೊದಲಿನಿಂದಲೂ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ. ತಾನು ಈ ಹಿಂದೆ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದನೋ ಅಲ್ಲೆಲ್ಲಾ ಕ್ರಿಕೆಟ್ ಬೆಟ್ಟಿಂಗ್ನ್ನು ಆಡುತ್ತಲೇ ಬಂದಿದ್ದಾನೆ. ಮಗ ಇಂತಹ ತಪ್ಪು ದಾರಿ ತುಳಿದಿದ್ದಾನೆ ಎಂದು ತಂದೆ ತಾಯಿಗಳಿಗೆ ಮೊದಲೇ ಗೊತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ. ಇರುವ ಒಬ್ಬನೇ ಮಗ ಎಂಬ ಪುತ್ರಪ್ರೇಮ ಅವರನ್ನು ಕಟ್ಟಿಹಾಕಿರುವ ಪರಿಣಾಮ ಈಗ ತಂದೆ ತಾಯಿಗಳೇ ಇದ್ದೊಬ್ಬ ಮಗಳನ್ನು ಸೇರಿದಂತೆ ಮಣ್ಣುಪಾಲಾಗಿದ್ದಾರೆ.























