ಹೊಸಪೇಟೆ: ಹೆತ್ತ ಮಗನೇ ತಂದೆ, ತಾಯಿ ಮತ್ತು ಸಹೋದರಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ.
ಅಕ್ಷಯ ಕುಮಾರ್ ಕೊಲೆ ಆರೋಪಿಯಾಗಿದ್ದು, ಈತ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮೀ, ಸಹೋದರಿ ಅಮೃತ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಅಕ್ಷಯ ಕುಮಾರ್ ಕುಟುಂಬದವರು ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯವರು. ತಂದೆ, ತಾಯಿ, ಸಹೋದರಿ ಒಟ್ಟಿಗೆ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯ ಎಲ್.ಬಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಜನವರಿ 27ರಂದು ಮೂರೂ ಜನರನ್ನು ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿ ಬೆಂಗಳೂರಿಗೆ ತೆರಳಿದ್ದ ಅಕ್ಷಯ ಕುಮಾರ್, ಅಲ್ಲಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೊಡಲು ಮುಂದಾಗಿದ್ದಾನೆ.
ಶುಕ್ರವಾರ ಕೊಲೆಯಾದ ಸುದ್ದಿ ಬೆಳಕಿಗೆ ಬಂದಿದ್ದು, ವಿಜಯನಗರ ಎಸ್ಪಿ ಜಾಹ್ನವಿ ಎಸ್., ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಕ್ಷಯ ಕುಮಾರ್ನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಬಗ್ಗೆ ಮಾಹಿತಿ ದೊರಕಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ.























