ಶಿವಮೊಗ್ಗ: ಅಶ್ವತ್ಥ್ ನಗರದ ಐದನೇ ತಿರುವಿನಲ್ಲಿರುವ ಹೊಮ್ಮರಡಿ ಕುಟುಂಬಕ್ಕೆ ಸೇರಿದ್ದ ಸಾನಿಧ್ಯ ಎಂಬುವವರ ಮನೆಯಲ್ಲಿ ಖ್ಯಾತ ಸ್ತ್ರೀರೋಗ ತಜ್ಞೆ ಜಯಶ್ರೀ (55) ಮತ್ತು ಪುತ್ರ ಆಕಾಶ್ (34) ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜಯಶ್ರೀ ಅವರು ಹೊಮ್ಮರಡಿ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಡೆತ್ನೋಟ್ ಬರೆದಿಟ್ಟು ಪ್ರತ್ಯೇಕ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಡಾ. ನಾಗರಾಜ್ ಹೊಮ್ಮರಡಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಒಂದೂವರೆ ವರ್ಷದ ಹಿಂದೆ ಸೊಸೆ ನಿವ್ಯಶ್ರೀಯೂ ಅದೇ ದಾರಿ ಹಿಡಿದಿದ್ದರು. ಇದರಿಂದ ಆಕಾಶ್ ಮತ್ತು ಜಯಶ್ರೀ ಅವರು ಆಘಾತಕ್ಕೆ ಒಳಗಾಗಿದ್ದರು. ಕಳೆದ ಮೇ ತಿಂಗಳಿನಲ್ಲಿ ಆಕಾಶ್ 2ನೇ ಮದುವೆಯಾಗಿದ್ದರು. ಇದೀಗ ತಾಯಿ ಮತ್ತು ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆಯಾದರೂ ಜಯಶ್ರೀ ಮತ್ತು ಆಕಾಶ್ ಅವರ ಕೊಠಡಿ ಬಾಗಿಲು ತೆರೆಯಲಿಲ್ಲ. ಸೊಸೆ ಕೂಡಲೇ ಪತಿಯ ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೊಠಡಿಯ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹೊಮ್ಮರಡಿ ಕುಟುಂಬ ನ್ಯಾಮತಿಯ ಮೂಲ ನಿವಾಸಿಗಳಾಗಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಮಗನ ನಡುವೆ ಜಗಳ ವಾಗಿತ್ತು ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ. ವಿನೋಬನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.





















