ಬೆಳಗಾವಿ: ತವರು ಮನೆಗೆ ಹೊರಟ ಪತ್ನಿಯನ್ನು ತಡೆದುದಕ್ಕೆ ನಡೆದ ಜಗಳ ವಿಕೋಪಕ್ಕೆ ತೆರಳಿ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಪತಿರಾಯನೊಬ್ಬ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನೇಗಿನಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಎಂದು ಗುರುತಿಸಲಾಗಿದೆ. ಆರೋಪಿತನಾದ ಆಕೆಯ ಗಂಡ ಕೃಷಿಕ ನೇಗಿನಾಳದ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜೇಶ್ವರಿ ಹಾಗೂ ಫಕ್ಕಿರಪ್ಪ ಅವರಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂಬ ವಿಷಯವನ್ನು ಮುಂದಿಟ್ಟು ದಂಪತಿ ನಡುವೆ ನಿತ್ಯ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಮದುವೆ ಮುನ್ನ ಗರ್ಭಿಣಿ: ಹಸುಗೂಸಿನ ಕತ್ತು ಹಿಸುಕಿದ ಅಜ್ಜಿ!
ಮಂಗಳವಾರ ಮೃತ ಮಹಿಳೆಯು ತನ್ನ ತಮ್ಮ ಮುತ್ತುವಿಗೆ ಕೈಗೆ ಗಾಯವಾಗಿದ್ದರಿಂದ ತವರು ಮನೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಆಗ ಗಂಡ ಜಮೀನಿನಲ್ಲಿ ಕೆಲಸ ಜಾಸ್ತಿ ಇದೆ ಈಗ ಹೋಗಬೇಡ ಎಂದು ಹೇಳಿದ್ದನು. ಇದರಿಂದ ದಂಪತಿ ನಡುವೆ ತೀವ್ರ ಜಗಳ ಉಂಟಾಗಿದೆ ಎನ್ನಲಾಗಿದೆ.
ಈ ಜಗಳ ವಿಕೋಪಕ್ಕೆ ತೆರಳಿ ಕೋಪಗೊಂಡ ಆರೋಪಿತನು, ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹಗ್ಗವನ್ನು ತೆಗೆದುಕೊಂಡು ಬಂದು ಮಲಗಿದ್ದ ರಾಜೇಶ್ವರಿಯ ಕೊರಳಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದನು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.






















