ಬಾಗಲಕೋಟೆ: ವಿಧಾನಸೌಧ ದುರಸ್ತಿಗೆ ಮುಂದಾಗಿರುವ ಸ್ಪೀಕರ್ ಯು.ಟಿ. ಖಾದರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನೂ ರಿಪೇರಿ ಮಾಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು.
ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತರಾಯರಿಗೆ ಹೊಳೆಯದ ಐಡಿಯಾ ಖಾದರ್ಗೆ ಹೊಳೆದಂತಿದೆ. ವಿಧಾನಸೌಧವನ್ನು ದುರಸ್ತಿ ಮಾಡಿಸಿ, ಫೋಟೋಶೂಟ್ ಮಾಡಿಸಿರುವುದನ್ನು ಗಮನಿಸಿದರೆ ಒಂದೋ ಅವರಿಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿರಬೇಕು, ಇಲ್ಲವೇ ಸಿಎಂ ಬದಲಾವಣೆ ಆಗುತ್ತಿರಬೇಕೆಂದು ಕುಟುಕಿದರು.
ಹಿಂದಿನ ಬಿಜೆಪಿ ಸರ್ಕಾರಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಳಗೊಳಿಸಿತ್ತು. ಅದರಿಂದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈಗ ಅದನ್ನು ತಡೆ ಹಿಡಿಯಲಾಗಿದೆ. ಸತೀಶ ಜಾರಕಿಹೊಳಿ ಆ ಬಗ್ಗೆ ಮಾತನಾಡುತ್ತಿಲ್ಲ. ಅವರೊಬ್ಬ ಸೀಸನ್ ಪಾಲಿಟಿಶನ್ ಎಂದು ಟೀಕಿಸಿದರು.






















