ದಿಲ್ಲೀಲಿ ವರಿಷ್ಠರ ಭೇಟಿಯಾಗದೆ ಸಿದ್ದು ರಿಟರ್ನ್

0
2

ನವದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾ ವಣೆ ಕುರಿತಂತೆ ಭಾರಿ ಚರ್ಚೆ ನಡೆದಿರುವ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕರೆದಿದ್ದ ಭೋಜನ ಕೂಟಕ್ಕೆ ಹಾಜರಾಗಲಿಲ್ಲ. ರಾಮಲೀಲಾ ಮೈದಾನದಲ್ಲಿ ನಡೆದ ಮತಗಳವು ರ‍್ಯಾಲಿಯಲ್ಲಿ ಪಾಲ್ಗೊಂಡರಾದರೂ ಯಾವುದೇ ವರಿಷ್ಠರನ್ನೂ ಭೇಟಿಯಾಗದೇ ಏಕಾಂಗಿಯಾಗಿ ಬೆಳಗಾವಿಗೆ ವಾಪಸ್ಸಾಗಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಈ ನಡೆ ರಾಜ್ಯದ ಭವಿಷ್ಯದ ರಾಜಕಾರಣದ ಸಂಕೇತ ಎಂದೇ ವಿಶ್ಲೇಷಿಸ ಲಾಗುತ್ತಿದೆ. ರಾಮಲೀಲಾ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆದ ವೋಟ್ ಚೋರಿ ಅಭಿಯಾನಕ್ಕೂ ಮೊದಲು ಮಧ್ಯಾಹ್ನ 1 ಗಂಟೆಗೆ ಎಐಸಿಸಿ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಖರ್ಗೆ ಅವರು ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರಿಗೆ ಭೋಜನಕೂಟ ಏರ್ಪಡಿಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಸೋನಿಯಾ – ರಾಹುಲ್ ಜತೆ ಡಿ.ಕೆ. ಶಿವಕುಮಾರ್ ಚರ್ಚೆ

ಅದಕ್ಕಿಂತ ಮುಖ್ಯವಾಗಿ ಹಿರಿಯ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಆದಿಯಾಗಿ ಭೋಜನ ಕೂಟ ಏರ್ಪಡಿಸಿದ್ದ ಖರ್ಗೆ ಉಪಸ್ಥಿತರಿದ್ದರು. ಕರ್ನಾಟಕದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭಾಗಿಯಾಗಿದ್ದರು.

ಆದರೆ ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್ ವಿಮಾನದಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಹೊರಡಬೇಕಿದ್ದ ಸಿಎಂ ಸಿದ್ದರಾಮಯ್ಯ ಅರ್ಧಗಂಟೆ ತಡವಾಗಿ ಹೊರಟರು. ಹೀಗಾಗಿ ಸಿಎಂ 12.30ರ ಬದಲಾಗಿ ದೆಹಲಿಗೆ 1 ಗಂಟೆಗೆ ತೆರಳಿದರು. ಅಲ್ಲಿಂದ ನೇರವಾಗಿ ಇಂದಿರಾ ಭವನಕ್ಕೆ ಸಿದ್ದರಾಮಯ್ಯ ಬರಲಿದ್ದಾರೆ ಎಂದೇ ಎಲ್ಲ ಕಾಂಗ್ರೆಸ್ ನಾಯಕರು ಭಾವಿಸಿದ್ದರು. ಆದರೆ ವಿಮಾನ ನಿಲ್ದಾಣದಿಂದ ನೇರವಾಗಿ ಕರ್ನಾಟಕ ಭವನಕ್ಕೆ ತೆರಳಿದ ಸಿದ್ದರಾಮಯ್ಯ ಆಪ್ತರ ಜತೆ ಭೋಜನ ಮಾಡಿ, ನೇರವಾಗಿ ರಾಮಲೀಲಾ ಮೈದಾನಕ್ಕೆ ತೆರಳಿದರು. ಅಲ್ಲಿಂದ 5.30ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿ ಬೆಳಗಾವಿಗೆ ಹೊರಟೇ ಬಿಟ್ಟರು.

ಈ ಬೆಳವಣಿಗೆ ರಾಜ್ಯ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರುವ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಸಿದ್ದರಾಮಯ್ಯ ಅವರು ಎಐಸಿಸಿ ಹಿರಿಯ ಮುಖಂಡರ ಭೋಜನ ಕೂಟವನ್ನೇ ಬಹಿಷ್ಕರಿಸಿದ್ದಾರೆ. ಆ ಮೂಲಕ ತಮ್ಮ ಅಸಮಾಧಾನದ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್..!

ಸಿಎಂ ಸಿದ್ದರಾಮಯ್ಯ ಭೋಜನ ಕೂಟದಲ್ಲಿ ಪಾಲ್ಗೊಳ್ಳದೇ ಇರುವುದು ಹಾಗೂ ಈ ಬಗ್ಗೆ ಯಾವ ನಾಯಕರು ಈವರೆಗೆ ಪ್ರತಿಕ್ರಿಯೆ ನೀಡದೇ ಇರುವುದು ಕಾಂಗ್ರೆಸ್‌ನಲ್ಲಿ ಆಂತರಿಕ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಪೂರ್ವಾನುಮತಿ ಪಡೆದು ಭೋಜನ ಕೂಟಕ್ಕೆ ಹೋಗಿದರೇ ಇದ್ದರೂ ಕೂಡ ಖುರ್ಚಿ ಕಚ್ಚಾಟದ ಸಂದರ್ಭದಲ್ಲಿ ಇದು ಅವರವರ ಬೆಂಬಲಿಗರಿಗೆ ಬೇರೆಯದೇ ಸಂದೇಶ ರವಾನಿಸುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ವ್ಯಾಖ್ಯಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡವಿನ ವೈಮನಸು ಶಮನಕ್ಕೆ ಬೆಂಗಳೂರಿನಲ್ಲಿ ಪರಸ್ಪರರ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿಸಿದ್ದ ಕಾಂಗ್ರೆಸ್ ವರಿಷ್ಠರು, ದೆಹಲಿಯಲ್ಲಿ ತಮ್ಮ ಉಪಸ್ಥಿತಿಯಲ್ಲೇ ನಡೆದ ಭೋಜನ ಕೂಟದಲ್ಲಿ ಇಬ್ಬರನ್ನೂ ಕೂಡಿಸುವಲ್ಲಿ ವಿಫಲರಾದರೇ ಎಂಬ ಜಿಜ್ಞಾಸೆ ಸ್ವತಃ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ. ಹೀಗಾಗಿ ಭಾನುವಾರದ ಮಧ್ಯಾಹ್ನದ ಭೋಜನ ಕೂಟದ ಪರಿಣಾಮ ಕರ್ನಾಟಕ ರಾಜ್ಯದ ರಾಜಕಾರಣದ ದಿಕ್ಸೂಚಿಎ ಎಂದೇ ಹೇಳಲಾಗುತ್ತಿದೆ.

ಜ.27ಕ್ಕೆ ಸಿದ್ದು ಶಕ್ತಿ ಪ್ರದರ್ಶನ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 2028ರವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟ ಜನವರಿ 27ರಂದು ಬೆಂಗಳೂರಿನಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲಿದೆ. ಇದೇ ವೇಳೆಸಿದ್ದರಾಮಯ್ಯ ಅವರಿಗೆ ಅಹಿಂದ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲು ಒಕ್ಕೂಟ ನಿರ್ಧರಿಸಿದೆ. ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Previous articleತಾರಾತಿಗಡಿ: ನಿಜಕ್ಕೂ ಬಿಗ್‌ಬಾಸ್ ಯಾರು?