Dharmasthala: ಧರ್ಮಸ್ಥಳ ಕೇಸ್‌ ಎಸ್‌ಐಟಿ ತನಿಖೆಗೆ ಅಂತ್ಯ?

0
153

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು.

19/7/2025ರಂದು ಎಸ್‌ಐಟಿಯನ್ನು ಡಾ.ಪ್ರಣವ ಮೊಹಾಂತಿ ಐಪಿಎಸ್, ಪೊಲೀಸ್ ಮಹಾನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಬೆಂಗಳೂರು ಇವರ ನೇತೃತ್ವದಲ್ಲಿ ರಚನೆ ಮಾಡಿತ್ತು. ಎಸ್‌ಐಟಿ ರಚನೆ ಮಾಡಿ ಒಂದು ತಿಂಗಳು ಸಮೀಪಿಸುತ್ತಿದೆ. ಅನಾಮಿಕ ಮಾಸ್ಕ್ ಧರಿಸಿರುವ ದೂರುದಾರ ತೋರಿಸಿರುವ ಜಾಗದಲ್ಲಿ ಎಸ್‌ಐಟಿ ಪೊಲೀಸರು ಉತ್ಪನನ ನಡೆಸಿದ್ದಾರೆ.

ಎಸ್‌ಐಟಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ದೂರಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂಬುದು ಸದ್ಯದ ಅಪ್‌ಡೇಟ್. ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ, ಎಸ್ಐಟಿ ರಚನೆ ಕುರಿತು ಚರ್ಚೆಗಳು ನಡೆದಿವೆ. ಪ್ರತಿಪಕ್ಷ ಬಿಜೆಪಿ ತನಿಖೆ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ಎಸ್‌ಐಟಿ ತನಿಖೆ ಅಂತ್ಯ: ಧರ್ಮಸ್ಥಳದಲ್ಲಿ ಮುಸುಕುಧಾರಿ ಹೇಳಿದಂತೆ ಹತ್ತಾರು ಕಡೆ ಭೂಮಿ ಅಗೆದರೂ ಏನೂ ಸಿಗದಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎನ್ನುವ ಪ್ರತಿಪಕ್ಷಗಳ ಅಬ್ಬರದ ಧ್ವನಿ ಹಾಗೂ ರಾಜ್ಯಾದ್ಯಂತ ಧರ್ಮಸ್ಥಳ ಪರವಾಗಿ ಎದ್ದಿರುವ ಜನಾಕ್ರೋಶಕ್ಕೆ ಸರ್ಕಾರ ಮಣಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಎಸ್‌ಐಟಿ ತನಿಖೆಗೆ ಸೋಮವಾರ ಇತಿಶ್ರೀ ಹಾಡಿ ಎಳ್ಳುನೀರು ಬಿಡುವ ಸಾಧ್ಯತೆ ಇದೆ?.

ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಎಸ್‌ಐಟಿ ತನಿಖೆ ಬಗ್ಗೆ ಸೋಮವಾರ ಉತ್ತರ ನೀಡಲಾಗುತ್ತದೆ ಎಂದು ಗುರುವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈಗ ಎಸ್‌ಐಟಿ ತನಿಖೆ ನಿಲ್ಲಿಸುವ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅಥವಾ ಗೃಹ ಸಚಿವ ಜಿ.ಪರ ಮೇಶ್ವರ ಘೋಷಣೆ ಮಾಡಬಹುದು.

ಅಷ್ಟೇ ಅಲ್ಲದೆ, ಅಪಪ್ರಚಾರ ಮಾಡಿದವರ ಮೇಲೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದ್ದು, ಸುಳ್ಳು ಮಾಹಿತಿ ನೀಡಿದ್ದರೆ ನಿರ್ದಾಕ್ಷಿಣ್ಯ ಶಿಕ್ಷೆ ಖಚಿತ ಎನ್ನುವ ಮೂಲಕ ಮಾಸ್ಕ್‌ಮ್ಯಾನ್ ವಿರುದ್ಧವೂ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಎಚ್ಚೆತ್ತ ಸರ್ಕಾರ: ಯಾವುದೇ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿಲ್ಲ ಎಂದು ವಿಧಾನಸಭೆಯಲ್ಲಿ ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ. ಯಾರೂ ಎಸ್‌ಐಟಿ ಅಥವಾ ಸರ್ಕಾರವನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಸತ್ಯಶೋಧನೆಗಾಗಿ ತನಿಖೆ ನಡೆದಿದೆ ಎಂದೂ ಪರಮೇಶ್ವ‌ರ ಹೇಳಿದ್ದಾರೆ.

ಆದರೆ ಇದು 18 ದಿನಗಳ ಎಸ್‌ಐಟಿ ತನಿಖೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆಯದ ಬಳಿಕ ನೀಡಿದ ಹೇಳಿಕೆ, ಸದನದಲ್ಲಿ ಪ್ರತಿಪಕ್ಷಗಳ ಶಾಸಕರು ನಿಲುವಳಿ ಸೂಚನೆ ಮೇಲೆ ಧರ್ಮಸ್ಥಳ ವಿಚಾರದ ಬಗ್ಗೆ ಸಾಮೂಹಿಕವಾಗಿಯೇ ಪ್ರಬಲ ಧ್ವನಿ ಎತ್ತಿದ್ದು ಹಾಗೂ ರಾಜ್ಯದ ಹಲವೆಡೆ ಜನರು ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ನಿಲ್ಲಿಸುವಂತೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವುದೇ ಪ್ರಮುಖ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಧರ್ಮಸ್ಥಳ ಕ್ಷೇತ್ರದ ಪ್ರಭಾವ, ಭಕ್ತಕೋಟಿಯ ನಂಬಿಕೆ ಜೊತೆಗೆ ಅಪಪ್ರಚಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಗೊಳ್ಳುತ್ತಿರುವುದನ್ನು ಅರಿತ ಪಕ್ಷದ ಹೈಕಮಾಂಡ್ ಸರ್ಕಾರ ಹಾಗೂ ಖುದ್ದು ಮಂತ್ರಿಗಳಿಗೆ ಅಗತ್ಯ ರಕ್ಷಣಾತ್ಮಕ ಹೇಳಿಕೆಗೆ ಸಂದೇಶ ರವಾನಿಸಿದೆ ಎಂಬ ಮಾಹಿತಿಯೂ ಇದೆ.

Previous articleಬೆಂಗಳೂರು: ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಇನ್ನಿಲ್ಲ
Next articleಸ್ಮರ್ಧಾತ್ಮಕ ಪರೀಕ್ಷೆಗೆ ಏಕರೂಪ ಶುಲ್ಕ, ಸರ್ಕಾರದ ಘೋಷಣೆ

LEAVE A REPLY

Please enter your comment!
Please enter your name here