ಬಾಗಲಕೋಟೆ(ರಬಕವಿ-ಬನಹಟ್ಟಿ): ಕಾಲ್ನಡಿಗೆ ಮೂಲಕವೇ ತೆರಳಬೇಕಾದರೆ ಎಷ್ಟೋ ಏಳು ಬೀಳುಗಳನ್ನು ಕಾಣುತ್ತೇವೆ. ಇಂಥಹ ಪರಿಸ್ಥಿತಿಯಲ್ಲಿ ಬರೋಬ್ಬರಿ 5 ಅಡಿ ಎತ್ತರ ಮರಗಾಲನ್ನು ಕಾಲಿಗೆ ಕಟ್ಟಿಕೊಂಡು ದೂರದ ಆಂಧ್ರದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನವರೆಗೆ ಸುಮಾರು ೫೫೦ ಕಿ.ಮೀ. ದೂರ ಕ್ರಮಿಸುತ್ತಿರುವದೆಂದರೆ ಅಸಾಮಾನ್ಯವೇ ಸರಿ.
ಬಾಗಲಕೋಟೆ ಜಿಲ್ಲೆಯ ತೇರದಾಳದ ಸಿದ್ದು ಸವದಿ ನಗರದ ಪವನ ಬುರುಡ(೨೬) ಹಾಗೂ ಪ್ರತಾಪ ಪಾತ್ರೋಟ(೨೦) ಇಂಥಹ ಕಾರ್ಯದಲ್ಲಿ ತೊಡಗಿರುವದು ವಿಶೇಷ ಸಾಧನೆಯಾಗಿದೆ. ಈ ಸಾಹಸಕ್ಕೆ ಕಳೆದ 7 ವರ್ಷಗಳಿಂದ ಪವನ ಬುರುಡ ಪಾದಯಾತ್ರೆ ನಡೆಸುತ್ತಿದ್ದರೆ, ಪ್ರತಾಪ ಪಾತ್ರೋಟ ಇದೇ ಮೊದಲ ಬಾರಿಯಾಗಿದೆ. 5 ಅಡಿಯಷ್ಟು ಎತ್ತರದ ಮರಗಾಲಿನಿಂದ ಯಾರ ಸಹಾಯವಿಲ್ಲದೇ ಪಾದಯಾತ್ರೆ ನಡೆಸುತ್ತಿದ್ದಾನೆ.
ಕಳೆದ ಹದಿನೈದು ದಿನಗಳಿಂದ ದಿನಂಪ್ರತಿ ೧೫-೨೦ ಕಿ.ಮೀ.ನಷ್ಟು ನಡಿಗೆ ಮಾಡಿ ತರಬೇತಿ ಪಡೆದು, ನಂತರ ಯುಗಾದಿ ಪ್ರಯುಕ್ತ ಶ್ರೀಶೈಲದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆಂದು ಪತ್ರಿಕೆಗೆ ತಿಳಿಸಿದರು.