ದಾವಣಗೆರೆ: ಬೆಣ್ಣೆನಗರಿಯಲ್ಲಿ ಮೈಸೂರು ಯುವ ದಸರಾ ಮಾದರಿಯಲ್ಲಿ ೨೦೨೫ರ ಜನವರಿ ೫ ಮತ್ತು ೬ರಂದು ರಾಜ್ಯಮಟ್ಟದ ಯುವ ಜನೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸುತ್ತಿದ್ದು, ೧೨೦೦ ಸ್ಪರ್ಧಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಕಲೆಯ ರಸ ದೌತಣ ನೀಡಲಿದ್ದಾರೆ. ಜನವರಿ ೫ರ ಬೆಳಗ್ಗೆ ೧೦.೩೦ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಯುವಜನೋತ್ಸವಕ್ಕೆ ೧.೫೦ ರಿಂದ ೨ ಕೋಟಿ ರೂ. ವೆಚ್ಚವಾಗಲಿದೆ. ಸರ್ಕಾರ ೭೫ ಲಕ್ಷ ರೂ. ಬಿಡುಗಡೆ ಮಾಡಿದೆ. ಇನ್ನು ಹೆಚ್ಚುವರಿ ೫೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಆರ್ಥಿಕ ಇಲಾಖೆಯಲ್ಲಿ ಅನುಮೋದನೆ ಹಂತದಲ್ಲಿದೆ. ಜೊತೆಗೆ ಸಂಘ-ಸಂಸ್ಥೆಗಳು ಕೂಡ ಸೇವೆ ಮಾಡಲು ಮುಂದೆ ಬಂದಿದ್ದು, ಅವರಿಗೂ ಅವಕಾಶ ನೀಡಲಾಗಿದೆ. ಇಲ್ಲಿನ ಯುವಜನೋತ್ಸವದಲ್ಲಿ ಆಯ್ಕೆ ಯಾದ ಸ್ಪರ್ಧಿಗಳು ಜನವರಿ ೧೦ರಿಂದ ೧೨ರವರೆಗೆ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.