ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ಕಬೀರಾಬಾದವಾಡಿ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಹುಮನಾಬಾದ್ ತಾಲೂಕಿನ ದಬಲಗುಂಡಿ ಗ್ರಾಮದ ಪವನ್ ಮಾಣಿಕ್ (22) ಹಾಗೂ ಈತನ ಚಿಕ್ಕಮ್ಮ ನರಸಮ್ಮ ಸೈಬಣ್ಣ (24) ಮೃತ ದುರ್ದೈವಿಗಳು. ಮನ್ನಾಎಖ್ಖೆಳ್ಳಿಯಿಂದ ಬೈಕ್ ಮೇಲ್ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಬೀದರ್- ಕಲಬುರಗಿ ವೇಗದೂತ ಬಸ್ಸಿಗೆ ಇವರ ಬೈಕ್ ಅಪ್ಪಳಿಸಿದೆ.
ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅತೀಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಹುಮನಾಬಾದ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















