ಮಂಗಳೂರು: ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ಸೋಮವಾರ ಬೆಳಗಿನ ಜಾವ ಸಮುದ್ರ ಮಧ್ಯೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಇಂದು ಬೆಳಗಿನ ಜಾವ ೩ರಿಂದ ೪ ಗಂಟೆಯ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಬೋಟ್ನಲ್ಲಿದ್ದ ೧೦ ಮೀನುಗಾರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ‘ರವಿವಾರ ಬೆಳಗ್ಗೆ ೧೦ ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಸೋಮವಾರ ಬೆಳಗ್ಗಿನ ಹೊತ್ತು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಧಕ್ಕೆಯಿಂದ ಸುಮಾರು ೮೮ ನಾಟಿಕಲ್ ದೂರದಲ್ಲಿ ಬೋಟ್ ಮುಳುಗಿದೆ. ಜತೆಯಲ್ಲಿದ್ದ ಬೋಟ್ ನವರು ಅವಘಡ ಗಮನಿಸಿ ಮೀನುಗಾರರನ್ನು ರಕ್ಷಿಸಿದ್ದಾರೆ’ ಎಂದು ಬೋಟ್ ಮಾಲಕರು ತಿಳಿಸಿದ್ದಾರೆ.