ಬಂಕಾಪುರ: ಬೈಕ್ ಸವಾರನೋರ್ವ ರಸ್ತೆ ಕ್ರಾಸ್ ಮಾಡುತ್ತಿರುವಾಗ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಬಾಲಕನೋರ್ವ ತೀವ್ರ ಗಾಯಗೊಂಡ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಸಮೀಪ ಬುಧವಾರ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಹಾನಗಲ್ ತಾಲೂಕು ಮಾಸನಕಟ್ಟಿ ಗ್ರಾಮದ ನಿಂಗಪ್ಪ ಕನ್ನಪ್ಪ ಸ್ವಾದಿ(೫೬), ಪ್ರೇಮಕ್ಕ ನಿಂಗಪ್ಪ ಸಾದ್ವಿ(೪೫), ಗಾಯಾಳು ಬಾಲಕನನ್ನು ಬಂಕಾಪುರ ಗ್ರಾಮದ ಸಮರ್ಥ ಉಳವಪ್ಪ ಕರ್ಲಿಂಗಣ್ಣನವರ(೯) ಎಂದು ತಿಳಿದುಬಂದಿದೆ.
ವಿವರ: ಬೈಕ್ ಸವಾರ ತನ್ನ ಪತ್ನಿ ಹಾಗೂ ಮೊಮ್ಮಗನನ್ನು ಬೈಕ್ ಹಿಂದೆ ಕೂಡ್ರಿಸಿಕೊಂಡು ಬಂಕಾಪುರ ಟೋಲ್ನಿಂದ ಹಾವೇರಿ ರಸ್ತೆ ಕಡೆಗೆ ಬೈಕ್ ಕ್ರಾಸ್ ಮಾಡುತ್ತಿದ್ದಾಗ ಹಾವೇರಿಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.