ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿ ಶುಕ್ರವಾರ ನೂರಾರು ಕಾಗೆಗಳು ನಿಗೂಢ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿತು. ಪ್ರಯೋಗಾಲಯ ಪರೀಕ್ಷೆಯನುಸಾರ ಎಚ್5ಎನ್1 ಸಾಂಕ್ರಾಮಿಕ ಸೋಂಕಿನಿಂದ ಸಾವಿಗೀಡಾಗಿರುವುದರಿಂದ ಈ ಸೋಂಕು ತಡೆಗಟ್ಟಲು ರಾಜ್ಯದ ಆರೋಗ್ಯಾಧಿಕಾರಿಗಳು ಸಜ್ಜಾಗಿದ್ದು ಸಾವಿಗೀಡಾದ ಕಾಗೆಗಳು ಹಾಗೂ ಕೋಳಿಗಳ ಎಲ್ಲಾ ಶವಗಳನ್ನು ಸುಡಬೇಕು ಅಥವಾ ಆಳವಾಗಿ ಹೂಳಬೇಕು ಎಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಲ್ಲದೆ, ಸತ್ತಪಕ್ಷಿಗಳ ಶವ ಮುಟ್ಟುವುದು ಅಥವಾ ಅವುಗಳ ನಿರ್ವಹಣೆ ಮಾಡದಂತೆಯೂ ಕಟ್ಟಪ್ಪಣೆ ನೀಡಿದೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ತಕ್ಷಣವೇ ಸಮಗ್ರ ಕ್ಷೇತ್ರದ ಮೇಲೆ ಕಣ್ಗಾವಲು ನಡೆಸುವಂತೆ ಕೇಂದ್ರ ಪಶುಸಂಗೋಪನಾ ಸಚಿವಾಲಯವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಎಚ್5ಎನ್1 ಸೋಂಕು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತಿದ್ದರೂ ಸೋಂಕಿತ ಪಕ್ಷಿಗಳ ನಿಕಟ ಸಂಪರ್ಕ, ಅವುಗಳ ಮಲ, ಲಾಲಾರಸ ಅಥವಾ ಕಲುಷಿತ ಅಂಶಗಳ ಮೂಲಕ ಮನುಷ್ಯರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಅಸಾಧ್ಯ. ಸೋಂಕು ತಗಲಿದಾಗ ಅದರ ಪರಿಣಾಮ ತೀವ್ರವಾಗಿರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.




















